ಮಡಿಕೇರಿ: ಇಲ್ಲಿನ ಅಬ್ಬಿಫಾಲ್ಸ್ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆರ್ಟಿಒ ಕಚೇರಿ ಕಾಮಗಾರಿ ಎರಡು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಈ ಕಾರಣಕ್ಕಾಗಿ ಹೊಸ ಕಟ್ಟಡಕ್ಕೆ ಆರ್ಟಿಒ ಕಚೇರಿ ಸ್ಥಳಾಂತರವಾಗಲು ಇನ್ನೂ ಕಾಲ ಕೂಡಿಬಂದಿಲ್ಲ.
ನಗರದ ಜನರಲ್ ತಿಮ್ಮಯ್ಯ ಅವರ ನಿವಾಸ ಸನ್ನಿಸೈಡ್ ಕಟ್ಟಡದಲ್ಲಿ ಸದ್ಯಕ್ಕೆ ಆರ್ಟಿಒ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಈ ಕಟ್ಟಡವನ್ನು ತೆರವುಗೊಳಿಸಿ ಕಟ್ಟಡವನ್ನು ಜನರಲ್ ತಿಮ್ಮಯ್ಯ ಸ್ಮಾರಕವಾಗಿಸಬೇಕೆನ್ನುವುದು ಹಲವು ವರ್ಷಗಳಿಂದ ಸ್ಥಳೀಯರ ಬೇಡಿಕೆಯಾಗಿದೆ.
ಬೇಡಿಕೆ ಕುರಿತು ಸಾರಿಗೆ ಸಚಿವ ಆರ್.ಅಶೋಕ್ ಇತ್ತೀಚೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಆದಷ್ಟು ಬೇಗನೇ ಆರ್ಟಿಒ ಕಚೇರಿಯನ್ನು ಸ್ಥಳಾಂತರಿಸ ಲಾಗುವುದು. ಕಟ್ಟಡವನ್ನು ಸ್ಮಾರಕವಾಗಿಸಲು ಬಿಟ್ಟುಕೊಡಲಾಗುವುದು ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಅಬ್ಬಿಫಾಲ್ಸ್ ರಸ್ತೆಯಲ್ಲಿ ಆರ್ಟಿಒ ಕಚೇರಿ ಸ್ಥಳಾಂತರಿಸಲು ಹೊಸ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಯಿತು. ಕಟ್ಟಡದ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದರೂ ಇತರೆ ಹಲವುಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ.
ಈಗ ಕಂಪೌಂಡ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಂದು ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮುಖ್ಯವಾಗಿ ಟೆಸ್ಟ್ ಟ್ರ್ಯಾಕ್, ದೂರವಾಣಿ ಸಂಪರ್ಕ, ವಾಹನಗಳ ನಿಲುಗಡೆ ಸ್ಥಳ, ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಕಾಮಗಾರಿಗಳು ಬಾಕಿ ಇವೆ. ಸುಮಾರು ರೂ. 1 ಕೋಟಿಯಷ್ಟು ಕೆಲಸ ಬಾಕಿ ಇದೆ. ಕಟ್ಟಡ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದ್ದು, ಈ ಕೆಲಸಗಳು ಪೂರ್ಣಗೊಂಡ ನಂತರ ಕಚೇರಿ ಸ್ಥಳಾಂತರಿಸಲಾಗುವುದು ಎಂದು ಆರ್ಟಿಒ ಹಬೀಬುಲ್ಲಾ ಖಾನ್ ಹೇಳಿದರು.
ಕಚೇರಿ ಸ್ಥಳಾಂತರಕ್ಕೆ ಈಗಲೂ ವಿರೋಧ:
ಈಗಲೂ ಹಲವು ಜನರು ಈ ಕಟ್ಟಡಕ್ಕೆ ಆರ್ಟಿಒ ಕಚೇರಿ ಸ್ಥಳಾಂತರವನ್ನು ವಿರೋಧಿಸುತ್ತಿದ್ದಾರೆ. ನಗರ ಪ್ರದೇಶದಿಂದ ಸುಮಾರು 7-8 ಕಿ.ಮೀ. ದೂರ ಇರುವ ಕಾರಣ ಸಾರ್ವಜನಿಕರಿಗೆ ಸಂಚರಿಸಲು ಕಷ್ಟವಾಗುತ್ತದೆ ಎನ್ನುವುದು ಪ್ರಮುಖ ಕಾರಣ.