ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಗೂರಿನ ಹೋರಿ ಚಾಂಪಿಯನ್

Last Updated 20 ಜನವರಿ 2011, 9:05 IST
ಅಕ್ಷರ ಗಾತ್ರ

ಬಿಜಾಪುರ: ಇಲ್ಲಿಯ ಶ್ರೀ ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಹಾಲು ಹಲ್ಲಿನ ಹೋರಿ ವಿಭಾಗದಲ್ಲಿ ಜಮಖಂಡಿ ತಾಲ್ಲೂಕು ಆಲಗೂರ ಗ್ರಾಮದ ಮಲ್ಲಪ್ಪ ಬಿ.ಖಾನಾಪುರ ಅವರ ಹೋರಿ ಚಾಂಪಿಯನ್ ಆಗಿ ಆಯ್ಕೆಯಾಗಿ ನಗರ ಸಭೆಯ 21 ಸಾವಿರ ನಗದು ಬಹುಮಾನವನ್ನು ತನ್ನ ಒಡೆಯನಿಗೆ ತಂದುಕೊಟ್ಟಿತು.

ಎರಡು ಹಲ್ಲಿನ ಹೋರಿ ವಿಭಾಗದಲ್ಲಿ ಅದೇ ಗ್ರಾಮದ ಎ.ಟಿ. ನರಸಗೊಂಡ ಅವರ ಹೋರಿ ಬಿ.ಎಲ್.ಡಿ.ಇ. ಸಂಸ್ಥೆ ಪ್ರಾಯೋಜಿತ 10 ಗ್ರಾಂ ಚಿನ್ನದ ಪದಕ ಗೆಲ್ಲುವುದರೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.

ನಾಲ್ಕು ಹಲ್ಲಿನ ಹೋರಿ ವಿಭಾಗದಲ್ಲಿ ವಿಜಾಪುರ ತಾಲ್ಲೂಕಿನ ಹಡಗಲಿ ತಾಂಡಾದ ಫೂಲ್‌ಸಿಂಗ್ ನಾರಾಯಣ ಅವರ ಹೋರಿಗೆ ಎ.ಪಿ.ಎಂ.ಸಿ ಪ್ರಾಯೋಜಿತ 21 ಸಾವಿರ ರೂಪಾಯಿ, ಆರು ಹಲ್ಲಿನ ವಿಭಾಗದಲ್ಲಿ ಜಮಖಂಡಿ ತಾಲ್ಲೂಕು ತೊದಲಬಾಗಿ ಗ್ರಾಮದ ಅಪ್ಪಾಸಿ ಭೀಮಪ್ಪ ಕೊಕಟನೂರ ಅವರ ಹೋರಿಗೆ ಜಿಲ್ಲಾ ಪಂಚಾಯಿತಿಯ  21 ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಚಾಂಪಿಯನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಾಪುರ ವ್ಯಾಪಾರಸ್ಥರ ಸಂಘದ 21 ಸಾವಿರ ರೂಪಾಯಿ ನಗದು ಬಹುಮಾನವನ್ನು ರಾಮಪುರದ ಬಸಪ್ಪ ಬಿಸಲಪ್ಪ ಬಡಚಿ ಅವರ ಕಿಲಾರಿ ಆಕಳು ಮಣಕ ಹಾಗೂ ಸಿದ್ಧೇಶ್ವರ ಸಂಸ್ಥೆ ಪ್ರಾಯೋಜಿತ 7.5 ಗ್ರಾಂ ಚಿನ್ನದ ಪದಕವನ್ನು ಅರಕೇರಿ ಗ್ರಾಮದ ಭಗವಂತ ಬಾಳಾಸಾಬ ಜಾಧವ ಅವರ ಕಿಲಾರಿ ಆಕಳು, ವಿಜಾಪುರ ಡಿ.ಸಿ.ಸಿ. ಬ್ಯಾಂಕ್ ಪ್ರಾಯೋಜಿತ 10 ಸಾವಿರ ರೂಪಾಯಿ ನಗದು ಬಹುಮಾನವನ್ನು ಕವಲಗಿ ಗ್ರಾಮದ ರಾಮಣ್ಣ ಗುರಲಿಂಗಪ್ಪ ಉಕ್ಕಲಿ ಅವರ ಎತ್ತಿನ ಜೋಡಿ, ಆಯಿಲ್ ಮಿಲ್ ಸಂಘದವರು ಪ್ರಾಯೋಜಿತ 10,500 ರೂಪಾಯಿ ನಗದು ಬಹುಮಾನಕ್ಕೆ ಚಿಕ್ಕ ಪಡಸಲಗಿಯ ಶ್ರೀಶೈಲ ಸತ್ಯಪ್ಪ ಚಿನ್ನವರ, ಕೆ.ಎಂ.ಎಫ್. ಪ್ರಾಯೋಜಿತ 10 ಸಾವಿರ ರೂಪಾಯಿ ನಗದು ಬಹುಮಾನಕ್ಕೆ ಕಮಲಾಪುರ ಪ್ರಕಾಶ ಸದಾಶಿವ ಅಂಬಿ ಅವರ ನಾಲ್ಕು ಹಲ್ಲಿನ ಹೋರಿ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಪ್ರಾಯೋಜಿತ 5 ಸಾವಿರ ನಗದು ಬಹುಮಾನಕ್ಕೆ ಬಸನಾಳದ ಸೋಮನಿಂಗಪ್ಪ ಚೆನ್ನಪ್ಪ ಸಾಹುಕಾರ ಅವರ ಎರಡು ಹಲ್ಲಿನ ಹೋರಿ, 3 ಸಾವಿರ ನಗದು ಬಹುಮಾನಕ್ಕೆ ಟಕ್ಕಳಕಿ ಎಲ್.ಟಿ.-2 ರ ರೂಪಸಿಂಗ್ ಕೃಷ್ಣಾ ರಾಠೋಡ ಅವರ ಆರು ಹಲ್ಲಿನ ಹೋರಿ ಹಾಗೂ 2 ಸಾವಿರ ರೂಪಾಯಿ ನಗದು ಬಹುಮಾನಕ್ಕೆ ವಿಜಾಪುರದ ಶ್ರೀಮಂತ ಸಿದ್ರಾಮಪ್ಪ ಬಂಡಿ ಅವರ ಮಿಶ್ರ ತಳಿ ಹಸುವಿಗೆ ನೀಡಲಾಯಿತು.

ವಾರ್ತಾ ಇಲಾಖೆಗೆ ಬಹುಮಾನ
ತೊರವಿ ಜಾನವಾರು ಜಾತ್ರೆಯಲ್ಲಿ ಆಯೋಜಿಸಿದ್ದ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಬಿಂಬಿಸುವ ವಾರ್ತಾ ಇಲಾಖೆಯ ‘ಪ್ರಗತಿ ನೋಟ’ ವಸ್ತು ಪ್ರದರ್ಶನಕ್ಕೆ ವಸ್ತು ಪ್ರದರ್ಶನ ವಿಭಾಗದಲ್ಲಿ ಪ್ರಥಮ ಬಹುಮಾನ ಲಭಿಸಿದೆ.

ಕೃಷಿ ಇಲಾಖೆಯ ವಸ್ತು ಪ್ರದರ್ಶನಕ್ಕೆ ಎರಡನೇ ಬಹುಮಾನವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ ಘೋಷಿಸಿದ್ದು, ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ  ಬಿ.ಆರ್. ರಂಗನಾಥ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.

ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ,  ನಮ್ಮ ಸಂಸ್ಕೃತಿ ಪರಂಪರೆ ಉಳಿಯಬೇಕಾದರೆ ಗೋ ಸಂಸ್ಕೃತಿ ಬೆಳೆಯಬೇಕು. ಆಧುನಿಕ ಕೃಷಿ ಪದ್ಧತಿಯಲ್ಲಿ ಗೋವುಗಳು ನಶಿಸಿ ಹೋಗುತ್ತಿವೆ. ಜಾನುವಾರುಗಳ ರಕ್ಷಣೆ ಮತ್ತು ಗೋ ಸಂಸ್ಕೃತಿ ಉಳಿವಿಗೆ ಸರ್ಕಾರ ಶಾಸನ ರೂಪಿಸಿದೆ. ಪಾರಂಪರಿಕ ಕೃಷಿ ಸಂಸ್ಕೃತಿಯ ಉಳಿವಿಗೆ ಪರಂಪರಾಗತ ಸಾವಯವ ಕೃಷಿ ಪದ್ಧತಿ ಬೆಳೆವಣಿಗೆಗೆ ಸರ್ಕಾರ ವಿಶೇಷ ಆಸಕ್ತಿ ವಹಿಸಿದೆ ಎಂದರು.

ನಗರಸಭೆ ಅಧ್ಯಕ್ಷ ಪರುಶರಾಮ ರಜಪೂತ ಕಾರ್ಯಕ್ರಮ ಉದ್ಘಾಟಿಸಿದರು. ಕೆ.ಎಂ.ಎಫ್. ಅಧ್ಯಕ್ಷ ಪಿ.ಟಿ. ಪಾಟೀಲ, ಎಪಿಎಂಸಿ ಆಧ್ಯಕ್ಷ ಎಂ.ಪಿ. ಕವಲಗಿ, ಉಪಾಧ್ಯಕ್ಷ ಬಿ.ಬಿ. ದನ್ನೂರ, ಕಾರ್ಯದರ್ಶಿ ಆರ್.ಎಂ. ಕುಮಾರಸ್ವಾಮಿ, ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕ ಡಾ. ಕೆ. ಕೋಡಿಗೌಡ, ಜಿಪಂ ಸದಸ್ಯ ಟಿ.ಕೆ. ಹಂಗರಗಿ ಇತರರು ಉಪಸ್ಥಿತರಿದ್ದರು.

ಗಂಗಾಮತ ಕೋಳಿ ಸಮಾಜದ ಸಭೆ  23ರಂದು
ಇಂಡಿ: ಗಂಗಾಮತ ಕೋಳಿ ಸಮಾಜದ ಪರ್ಯಾಯ ಪದಗಳನ್ನು (39) ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಸಂಬಂಧ ಜ.23 ರಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಕೋಳಿ ಸಮಾಜದ ಕಾರ್ಯಾಲಯದಲ್ಲಿ ತಾಲ್ಲೂಕಿನ ಗಂಗಾಮತ ಕೋಳಿ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ ಎಂದು ಅಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ತಿಳಿಸಿದ್ದಾರೆ. ಖಂಡರು ಮತ್ತು ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT