ಮುದ್ದೇಬಿಹಾಳ: ಪಟ್ಟಣದ ಮೂಲಕ ಹಾದು ಹೋಗುವ ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ನಿರ್ಮಾಣಕ್ಕೆ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದರು. ನವದೆಹಲಿಯ ರೈಲ್ವೆ ಭವನದಲ್ಲಿ ತಮ್ಮನ್ನು ಭೇಟಿಯಾದ ಪಟ್ಟಣದ ಮರ್ಚಂಟ್ಸ್ ಅಸೋಸಿಯೇಶನ್ ಸದಸ್ಯರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಈ ಮಾರ್ಗದ ನಿರ್ಮಾಣಕ್ಕೆ ಆಗ್ರಹಿಸಿ ನಡೆದಿರುವ ಹೋರಾಟಗಳ ಬಗ್ಗೆ ಅರಿವಿದೆ ಎಂದು ಸಚಿವರು ತಿಳಿಸಿದರು.ಆಲಮಟ್ಟಿಯಿಂದ ಯಾದಗಿರಿಗೆ ತೆರಳುವ ಮಾರ್ಗದ ರಚನೆಯಿಂದ ಈ ಭಾಗದ ಜನತೆಗೆ ಆಗುವ ಲಾಭಗಳು, ಆರ್ಥಿಕಾಭಿವೃದ್ಧಿ ಬಗ್ಗೆ ನಿಯೋಗದ ಸದಸ್ಯರು ಸಚಿವರಿಗೆ ವಿವರಿಸಿದರು.
ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಎರಡು ತಾಸುಗಳ ಕಾಲ ಯೋಜನೆಯ ಅನುಷ್ಠಾನದ ಬಗ್ಗೆ ಚರ್ಚಿಸಿದ ಸಚಿವರು ಯಾವುದೇ ತಾಂತ್ರಿಕ ಅಡಚಣೆಯಾದರೂ ಚಿಂತೆ ಇಲ್ಲ, ಈ ಬೇಡಿಕೆಗಳ ಬಗ್ಗೆ ಚರ್ಚಿಸಿ ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ಈ ಮಾರ್ಗ ರಚನೆಗೆ ಹಣಕಾಸು ನೆರವು ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿ ಹೇಳಿದರು.
ನಿಯೋಗದಲ್ಲಿ ಸಂಘದ ಅಧ್ಯಕ್ಷ ವಾಸುದೇವ ಶಾಸ್ತ್ರಿ, ಬಾಬು ಬಿರಾದಾರ, ಪ್ರಭು ದೇಸಾಯಿ, ಬುಡ್ಡಾ ಕುಂಟೋಜಿ, ಸುಧೀರ ನಾವದಗಿ, ಮುನ್ನಾ ಓಸ್ವಾಲ, ಸಂಗಣ್ಣ ರಾಂಪೂರ, ಮುತ್ತು ಕಡಿ, ಬಸು ಕೋಳೂರ, ಶ್ರೀಪಾದ ಜಂಬಗಿ, ಶಂಕರಗೌಡ ಪಾಟೀಲ, ಅಲ್ಲಾಭಕ್ಷ್ ಢವಳಗಿ, ರಫೀಕ್ ಜಾನ್ವೇಕರ, ಗುರುಸ್ವಾಮಿ ಬೂದಿಹಾಳಮಠ, ವೆಂಕನಗೌಡ ಪಾಟೀಲ, ಪರಶುರಾಮ ಮುರಾಳ, ರಾಜೇಂದ್ರ ರಾಯಗೊಂಡ, ಪ್ರಕಾಶ ಸಂಗಮ, ಶೇಖರ ಮುರಾಳ, ಅಶೋಕ ಬಿದರಕುಂದಿ, ವಿಶ್ವನಾಥ ಪತ್ತಾರ, ರವಿ ಭೋಸಲೆ, ಮುತ್ತು ಪಾಟೀಲ ಮೊದಲಾದವರಿದ್ದರು.
.