ಮುಳಬಾಗಲು: ಜಲಂಧರ್, ಹೈದರಾಬಾದ್ನಲ್ಲಿ ಈಚೆಗೆ ನಡೆದ ಪ್ರಕೃತಿ ವಿಕೋಪ ಜಿಲ್ಲೆಯ ರೈತರಿಗೆ ವರದಾನವಾಗಿ ಪರಿಣಮಿಸಿದೆ. ಜಿಲ್ಲೆಯ ಆಲೂಗೆಡ್ಡೆಗೆ ಚೆನ್ನೈನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿದ್ದು ರೈತರು ಸಂತಸಗೊಂಡಿದ್ದಾರೆ.
ದಕ್ಷಿಣ ಭಾರತದಲ್ಲಿ ಆಲೂಗೆಡ್ಡೆ ಬೆಳೆಯುವ ಪ್ರದೇಶಗಳಿಗೆ ಬಿತ್ತನೆ ಬೀಜವನ್ನು ದೂರದ ಜಲಂಧರ್ನಿಂದಲೇ ಸರಬರಾಜು ಮಾಡಲಾಗುತ್ತದೆ. ಅಲ್ಲಿ ಕಳೆದ ತಿಂಗಳು ಉಂಟಾದ ಪ್ರಕೃತಿ ವಿಕೋಪ ಆಲೂಗೆಡ್ಡೆ ಬೆಳೆವಣಿಗೆ ಕುಂಠಿತವಾಗಲು ಕಾರಣವಾಗಿದೆ.
ಚೆನ್ನೈ ಮಾರುಕಟ್ಟೆಯಲ್ಲಿ ಜಿಲ್ಲೆಯ ಆಲೂಗಡ್ಡೆಗೆ ಉತ್ತಮ ಬೇಡಿಕೆ ಉಂಟಾಗಿದೆ. ಆಂಧ್ರಪ್ರದೇಶದಲ್ಲಿ ಪ್ರಕೃತಿ ವಿಕೋಪ ಆಲೂಗಡ್ಡೆ ಬೆಳೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಪೂರೈಕೆ ನಿಂತಿದೆ. ಇದೂ ಕೂಡ ಬೆಲೆ, ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ವಾರ 46 ಕೆಜಿ ಅಲೂಗಡ್ಡೆ ಚೀಲಕ್ಕೆ ಸಾವಿರ ರೂಪಾಯಿ ಗಡಿಗೆ ಬಂದಿತ್ತು. ಈಗ ಎಂಟು ನೂರಕ್ಕೆ ಬಂದಿದೆ. ಆದರೂ ನಷ್ಟ ಇಲ್ಲ ಎನ್ನುತ್ತಾರೆ ತಾಲ್ಲೂಕಿನ ಖಾದ್ರಿಪುರ ಗ್ರಾಮದ ಅಲೂಗಡ್ಡೆ ಬೆಳೆಗಾರ ಮುನಿವೆಂಕಟಪ್ಪ.
ಬೆಂಗಳೂರಿನ ಮಾರುಕಟ್ಟೆಗಿಂತಲೂ ಚೆನ್ನೈ ಮಾರುಕಟ್ಟೆ ಕಡೆ ರೈತರು ಹೆಚ್ಚು ಆಕರ್ಷಿತರಾಗಿದ್ದಾರೆ. ಅಲೂಗಡ್ಡೆ ವ್ಯಾಪಾರಿ ಎಸ್ಆರ್ಟಿ ಸಂಸ್ಥೆಯ ಶ್ರೀಧರ್ ಪ್ರತಿ ದಿನ ಐವತ್ತಕ್ಕೂ ಹೆಚ್ಚಿನ ಲೋಡ್ ಅಲೂಗಡ್ಡೆಯನ್ನು ಇಲ್ಲಿಂದ ರವಾನಿಸುತ್ತಿದ್ದಾರೆ.