ಬೆಳಗಾವಿ: ಕೊಳೆರೋಗಕ್ಕೆ ತುತ್ತಾದ ಆಲೂಗಡ್ಡೆ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಅರ್ಹ ಫಲಾನುಭವಿಗಳಿಗೆ ಹಸಿರು ಪಡಿತರ ಚೀಟಿ ಮತ್ತು ವೃದ್ಧಾಪ್ಯ ವೇತನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ತಾಲ್ಲೂಕಿನ ಕಡೋಲಿ ಗ್ರಾಮದಲ್ಲಿ ಹಲವು ಬಡವರಿಗೆ ಹಸಿರು ಪಡಿತರ ಚೀಟಿ ದೊರಕಿಲ್ಲ. ಇದರಿಂದ ಅವರು ಆಹಾರಧಾನ್ಯ ದೊರಕದೆ ಹಸಿವಿನಿಂದ ಬಳಲುತ್ತಿದ್ದಾರೆ. ಈ ಕುರಿತು ಪರಿಶೀಲಿಸಿ ಎಲ್ಲ ಅರ್ಹ ಫಲಾನುಭವಿಗಳಿಗೆ ಹಸಿರು ಪಡಿತರ ಚೀಟಿ ಸಿಗುವಂತೆ ವ್ಯವಸ್ಥೆ ಮಾಡಬೇಕು. ಜೀವನ ಸಾಗಿಸಲು ಸಾಧ್ಯವಾಗದೇ ಅತಂತ್ರ ಸ್ಥಿತಿಗೆ ಸಿಲುಕಿರುವ ವೃದ್ಧರಿಗೆ ಕೂಡಲೇ ವೃದ್ಧಾಪ್ಯ ವೇತನ ವಿತರಿಸಬೇಕು ಎಂದರು.
ರೈತ ಸಂಘದ ಮುಖಂಡರಾದ ಅಪ್ಪಾಸಾಹೇಬ ದೇಸಾಯಿ, ಚಂದ್ರು ರಾಜಾಯಿ, ಕಲಗೌಡ ಪಾಟೀಲ, ಭೀಮಶಿ ಪಾಟೀಲ ಹಾಜರಿದ್ದರು.
ಒತ್ತಾಯ: ಅಂಧ ಶ್ರದ್ಧೆ ನಿರ್ಮೂಲನೆಯ ಹೋರಾಟಗಾರ ಡಾ. ನರೇಂದ್ರ ದಾಬೋಲಕರ ಅವರ ಹತ್ಯೆಗೆ ಕಾರಣವಾದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಡಾ. ನರೇಂದ್ರ ದಾಬೋಲಕರ ಅವರ ಹತ್ಯೆ ನಡೆದು 15 ಕಳೆದರೂ ಮಹಾರಾಷ್ಟ್ರ ಸರ್ಕಾರ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ಹೀಗಾಗಿ ಕೂಡಲೇ ಮಹಾರಾಷ್ಟ್ರ ಸರ್ಕಾರ ಎಚ್ಚೆತ್ತುಕೊಂಡು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.