ಜೇವರ್ಗಿ: ಜೂನ್ 15 ಮತ್ತು 16 ರಂದು ಗುಲ್ಬರ್ಗದ ಕನ್ನಡಸಂಘದಲ್ಲಿ ನಡೆಯುವ 13 ನೇ ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ರಂಗಕರ್ಮಿ, ಸಾಹಿತಿ ಎಲ್.ಬಿ.ಕೆ.ಆಲ್ದಾಳ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಫಲಪುಷ್ಪ ನೀಡಿ ಅಧಿಕೃತವಾಗಿ ಆಮಂತ್ರಣ ನೀಡಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿ, `ಜೂ.15,16ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆಲ್ದಾಳ್ ಅವರ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆಗೆ ಮುಟ್ಟಿಸುವ ಉದ್ದೇಶ ಕಸಾಪ ಹೊಂದಿದೆ' ಎಂದು ತಿಳಿಸಿದರು.
ಅಧಿಕೃತ ಆಮಂತ್ರಣ ಸ್ವೀಕರಿಸಿದ ಸಾಹಿತಿ ಆಲ್ದಾಳ ಅವರು, `ನಾನು ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಲಿಲ್ಲ. ನನ್ನಂಥ ಗ್ರಾಮೀಣ ಪ್ರದೇಶದ ಸಾಹಿತಿಗಳನ್ನು ಗುರುತಿಸಿ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕಸಾಪ ಪದಾಧಿಕಾರಿಗಳ ಔದಾರ್ಯದ ನಡವಳಿಕೆ' ಎಂದು ವಿನಯದಿಂದ ಹೇಳಿದರು.
ಡಾ.ರಾಜೇಂದ್ರ ಯರನಾಳೆ, ಸುರೇಶ ಬಡಿಗೇರ, ಬಿ.ಎಚ್.ನಿರಗುಡಿ, ಸಂಧ್ಯಾ ಹೊನಗುಂಟಿಕರ್, ಶಿವಶಾಂತರಡ್ಡಿ ಪಾಟೀಲ, ಜಿ.ಎಸ್.ಮಾಲಿ ಪಾಟೀಲ, ತಾಲ್ಲೂಕ ಕಸಾಪ ಅಧ್ಯಕ್ಷ ಶಿವಕವಿ ಹಿರೇಮಠ ಜೋಗೂರ ಇದ್ದರು.