ಯಾದಗಿರಿ: ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ಅವರು ನಿರ್ವಹಿಸುವ ಕೆಲ ಚಟುವಟಿಕೆಗಳ ಆಧಾರದ ಮೇಲೆ ಪ್ರತಿ ತಿಂಗಳು ಕನಿಷ್ಠ ₨1,000- ಪ್ರೋತ್ಸಾಹಧನ ನಿಗದಿಪಡಿಸಿರುವುದನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಸ್ವಾಗತಿಸಿದೆ.
ಗ್ರಾಮೀಣ ಸ್ವಾಸ್ಥ್ಯ ಹಾಗೂ ಪೌಷ್ಟಿಕ ದಿನಗಳಿಗೆ ಹಾಜರಾಗಿದ್ದಕ್ಕೆ ₨200-, ಗ್ರಾಮೀಣ ಸ್ವಾಸ್ಥ್ಯ, ನೈರ್ಮಲ್ಯ ಹಾಗೂ ಪೌಷ್ಟಿಕ ಸಮಿತಿ ಸಭೆ ನಡೆಸಿದ್ದಕ್ಕಾಗಿ ₨150-, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಸಿಕ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ₨150-, ತಾಯಿ ಮತ್ತು ಮಗುವಿನ ಆರೈಕೆಗೆ ಸಂಬಂಧಿಸಿದಂತೆ ಎಲ್ಲ ಚಟುವಟಿಕೆಗಳ ದಾಖಲಾತಿಗಳನ್ನು ನಿರ್ವಹಿಸಿದ್ದಕ್ಕಾಗಿ ₨500 ಸೇರಿದಂತೆ- ಒಟ್ಟಾರೆಯಾಗಿ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೂ ಕಡ್ಡಾಯ ಮಾಸಿಕ ₨1,000 ಕನಿಷ್ಠ ಕಾರ್ಯನಿರ್ವಹಣೆ ಪ್ರೋತ್ಸಾಹಧನ ಸಿಗುವಂತೆ ಮಾಡಿರುವುದು ಪ್ರೋತ್ಸಾಹದಾಯಕ ಎಂದು ಹೇಳಿದೆ.
ಇದರೊಂದಿಗೆ ಆಶಾ ಕಾರ್ಯಕರ್ತೆಯರು ನಿರ್ವಹಿಸುವ ಜೆವೈಸಿ, ಎಚ್ಬಿಎನ್ಸಿ, ಲಸಿಕಾ ಕಾರ್ಯಕ್ರಮ ಇತ್ಯಾದಿ ಹಲವಾರು ಪ್ರಕರಣಗಳಿಗೆ ಇದುವರೆಗೂ ಪಡೆಯುತ್ತಿರುವ ಪ್ರೋತ್ಸಾಹಧನಗಳು ಹಾಗೂ ನಮ್ಮ ರಾಜ್ಯ ಸರ್ಕಾರಗಳು ಮ್ಯಾಚಿಂಗ್ ಗ್ರ್ಯಾಂಟ್ ಮೂಲಕ ನೀಡುವ ಸರಿಸಮ ಪ್ರೋತ್ಸಾಹಧನಗಳು ಮುಂದುವರಿಯಲಿವೆ. ಅವುಗಳ ಜೊತೆಗೆ ಈ ಕಾರ್ಯನಿರ್ವಹಣೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.
ಇದುವರೆಗೂ ಆಶಾ ಕಾರ್ಯಕರ್ತೆಯರು ತಮ್ಮ ಕೆಲಸಗಳಿಗೆ ₨500 ರಿಂದ ₨1,500 ವರೆಗೆ ಪ್ರೋತ್ಸಾಹಧನ ಪಡೆಯುತ್ತಿದ್ದರು. ಆದರೆ, ಅವರ ಕಾರ್ಯಕ್ಷೇತ್ರದಲ್ಲಿ ಹೆರಿಗೆ ಪ್ರಕರಣಗಳು ಹಾಗೂ ನವಜಾತ ಶಿಶುಗಳ ಸಂಖ್ಯೆ ಕಡಿಮೆಯಿದ್ದಲ್ಲಿ ಪ್ರೋತ್ಸಾಹ ಧನವೂ ಕಡಿಮೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಾಸಿಕ ವೇತನ ನಿಗದಿಪಡಿಸಬೇಕು ಎನ್ನುವ ಬೇಡಿಕೆ ಸಹಿತ ಈಗಿರುವ ಎಲ್ಲ ಚಟುವಟಿಕೆಗಳಿಗೆ ಹಣವನ್ನು ಹೆಚ್ಚಿಸಬೇಕು, ಮತ್ತಿತರ ಸೌಕರ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಸತತವಾಗಿ ಸರ್ಕಾರವನ್ನು ಒತ್ತಾಯಿಸುತ್ತ ಬಂದಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರದ ಆರೋಗ್ಯ ಸಚಿವರಿಗೆ ಆಲ್ ಇಂಡಿಯಾ ಯುಟಿಯುಸಿ ಅಖಿಲ ಭಾರತ ಉಪಾಧ್ಯಕ್ಷ ಕೆ.ರಾಧಾಕೃಷ್ಣ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಆಶಾ ಕಾರ್ಯಕರ್ತೆಯರ ಸಂಘಟನೆಗಳ ಮುಖಂಡರ ನಿಯೋಗವು ಮನವಿ ಸಲ್ಲಿಸಿತ್ತು. ಸುದೀರ್ಘ ಹೋರಾಟದ ಫಲವಾಗಿ ದೊರಕಿದ ವಿಜಯಕ್ಕೆ ಸಂಘವು ಕಾರ್ಯಕರ್ತೆಯರನ್ನು ಹಾಗೂ ಸರ್ಕಾರವನ್ನು ಅಭಿನಂದಿಸುವುದಾಗಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ. ಸೋಮಶೇಖರ ಯಾದಗಿರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.