ಮುಂಬೈ : ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭಾನುವಾರ ಬೆಳಿಗ್ಗೆ ಇಲ್ಲಿನ ಆಸ್ಪತ್ರೆಯಿಂದ ಸ್ವಗ್ರಾಮ ರಾಳೇಗಣಸಿದ್ಧಿಗೆ ತೆರಳಿದರು. ಆರೋಗ್ಯದ ಸಮಸ್ಯೆಗಳು ಸುಧಾರಣೆ ಹೊಂದಿದ ಬಳಿಕ ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಆರಂಭಿಸಿದ ಚಳವಳಿಯ ಮುಂದಿನ ಹಂತದ ಸ್ವರೂಪದ ಬಗ್ಗೆ ಚಿಂತಿಸುವುದಾಗಿ ಈ ಸಂದರ್ಭದಲ್ಲಿ ಅವರು ಹೇಳಿದರು.
`ನಾನೀಗ ಸರಿಹೋಗಿದ್ದೇನೆ. ಆದರೆ ಈಗಲೂ ನಿಶ್ಯಕ್ತಿ ಇದೆ. ವೈದ್ಯರು ಸಲಹೆ ಮಾಡಿದಂತೆ ಕನಿಷ್ಟ ಒಂದು ತಿಂಗಳವರೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಪೂರ್ಣ ಗುಣಮುಖನಾದ ಮೇಲೆ ಚಳವಳಿಯ ಬಗ್ಗೆ ಚಿಂತಿಸುತ್ತೇನೆ~ ಎಂದು ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಅವರ ಮುಂದಿನ ನಡೆಯ ಕುರಿತು ಕೇಳಲಾದ ಪ್ರಶ್ನೆಗೆ ಹಜಾರೆ ವರದಿಗಾರರಿಗೆ ಉತ್ತರಿಸಿದರು.
ತಮ್ಮ ತಂಡದ ಸದಸ್ಯರ ವಿರುದ್ಧ ಹೊರಿಸಲಾದ ಭ್ರಷ್ಟಾಚಾರದ ಆರೋಪದ ಕುರಿತಂತೆ ಪ್ರತಿಕ್ರಿಯಿಸಿದ ಅಣ್ಣಾ, `ಹತ್ತು ದಿನಗಳಿಂದ ಹೊರಜಗತ್ತಿನ ಸಂಪರ್ಕ ನನಗೆ ಇರಲಿಲ್ಲ~ ಎಂದರು. ಈ ಕುರಿತಂತೆ ಉತ್ತರ ನೀಡಲು ಅವರು ನಿರಾಕರಿಸಿದರು.
ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ ಪ್ರವಾಸದ ಕುರಿತಂತೆ ಮಾತನಾಡಿದ ಅಣ್ಣಾ, ವೈದ್ಯರ ಸಲಹೆಯ ಪ್ರಕಾರ ಈ ಸಮಯದಲ್ಲಿ ಪ್ರವಾಸ ಮಾಡಲು ತಾವು ಸಮರ್ಥರಾಗಿಲ್ಲ ಎಂದರು. `ಭ್ರಷ್ಟಾಚಾರದ ವಿರುದ್ಧದ ಹೋರಾಟ ಒಂದು ದಿನದ್ದಲ್ಲ. ಇದು ದೀರ್ಘ ಕಾಲದ ಯುದ್ಧ.
ನಾನು 25 ವರ್ಷಗಳಿಂದ ಅದರ ವಿರುದ್ಧ ಹೋರಾಡುತ್ತಿದ್ದೇನೆ. ವೈದ್ಯರ ಸಲಹೆಯ ಪ್ರಕಾರ ನಾನು ವಿಶ್ರಾಂತಿ ಪಡೆಯುತ್ತೇನೆ. ಗುಣಮುಖನಾದ ಬಳಿಕ ಹೊರಗೆ ಕಾಣಿಸಿಕೊಳ್ಳುತ್ತೇನೆ~ ಎಂದು ಹೇಳಿದರು. ಅಣ್ಣಾ ಪುಣೆಯ ಸಂಚೇತಿ ಆಸ್ಪತ್ರೆಗೆ ಶ್ವಾಸಕೋಶ ನಾಳದ ಸೋಂಕಿಗೆ ಚಿಕಿತ್ಸೆ ಪಡೆಯಲು ಡಿ. 31ರಂದು ದಾಖಲಾಗಿದ್ದರು.