ದಾವಣಗೆರೆ: ಆಹಾರ ಉತ್ಪಾದನೆ ಪ್ರಮಾಣ ಹೆಚ್ಚಾಗಬೇಕಾದರೆ ತಂತ್ರಜ್ಞಾನಗಳ ಬಳಕೆ ಅಗತ್ಯ ಎಂದು ಹಿರಿಯ ಕೃಷಿ ತಜ್ಞ ಡಾ.ಸಿ.ಬಿ. ಜಗನ್ನಾಥರಾವ್ ಅಭಿಪ್ರಾಯಪಟ್ಟರು.
ಸಮನ್ವಯ ಟ್ರಸ್ಟ್ ವತಿಯಿಂದ ನಗರದ ಬಾಪೂಜಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ `ಸುಸ್ಥಿರ ಅಭಿವೃದ್ಧಿ- ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಗೆ ಒಂದು ಹೊಸ ಆಯಾಮ~ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಜನಸಂಖ್ಯೆ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಉತ್ಪಾದನೆಯಾಗುತ್ತಿರುವ ಆಹಾರದ ಪ್ರಮಾಣ ಸಾಕಾಗುತ್ತಿಲ್ಲ. ಪೌಷ್ಟಿಕ, ಸುರಕ್ಷಿತ ಆಹಾರ ಪದಾರ್ಥಗಳಿಗಾಗಿ ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದರಿಂದ ಆಹಾರ ಭದ್ರತೆಯೂ ಸಾಧ್ಯ ಎಂದು ಹೇಳಿದರು.
ಅಮೆರಿಕಾದಲ್ಲಿ, ಕಂಪ್ಯೂಟರ್ ಬಳಸಿ ಅತ್ಯುನ್ನತ ತಂತ್ರಜ್ಞಾನದ ಮೂಲಕ ಕೃಷಿ ಮಾಡಲಾಗುತ್ತಿದೆ. ಕಂಪ್ಯೂಟರ್ಗೆ ಎಲ್ಲ ಮಾಹಿತಿ ದಾಖಲಿಸಿದರೆ, ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದರ ಸಲಹೆ ನೀಡುತ್ತದೆ. ಅದನ್ನು ಪಾಲಿಸಿದರೆ, ಕೃಷಿ ಸರಾಗವಾಗಲಿದೆ. ಇದರೊಂದಿಗೆ ಸಾವಯವ ಕೃಷಿಯೂ ಅನುಕೂಲಕರ ಎಂದರು.
ನಾವು ಬಳಸುವ ತಂತ್ರಜ್ಞಾನದಿಂದ ಆಗುವ ಪ್ರಯೋಜನದ ಕುರಿತು ಪ್ರಾತ್ಯಕ್ಷಿಕೆ ಮೂಲಕ ಇತರ ರೈತರಿಗೆ ತಿಳಿಸಿಕೊಡಬೇಕು. ಹಿರಿಯ ರೈತರಲ್ಲಿ ತಂತ್ರಜ್ಞಾನ ಬಳಕೆಯ ಮಹತ್ವವನ್ನು ತಿಳಿಸಬೇಕು. ತಂತ್ರಜ್ಞಾನ ಪ್ರಯೋಗಾಲಯದಿಂದ ಕ್ಷೇತ್ರಕ್ಕೆ ವರ್ಗಾವಣೆಯಾಗಬೇಕು. ಈ ನಿಟ್ಟಿನಲ್ಲಿ ತಾವು ಶಿಡ್ಲಘಟ್ಟ ಮತ್ತಿತರ ಪ್ರದೇಶದಲ್ಲಿ ಪ್ರಯತ್ನ ಪಡುತ್ತಿರುವುದಾಗಿ ತಿಳಿಸಿದರು.
ಕಾರ್ಯಾಗಾರ ಉದ್ಘಾಟಿಸಿದ ಪ್ರೆಸ್ಟಿನ್ ಆರ್ಗ್ಯಾನಿಕ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಸಿ. ರಘು ಮಾತನಾಡಿ, ಅಭಿವೃದ್ಧಿ ಎಂಬುದು ನೈಸರ್ಗಿಕ ಸಂಪತ್ತಿನ ನಾಶಕ್ಕೂ ಕಾರಣವಾಗುತ್ತಿದೆ. ಹೀಗಾಗದಂತೆ, ಅಭಿವೃದ್ಧಿ ಹೊಂದುವುದು ಹೇಗೆ ಎಂಬುದನ್ನು ಚಿಂತಿಸಬೇಕಿದೆ. ಜೀವನಶೈಲಿ ಬದಲಾವಣೆ, ಕೊಳ್ಳುಬಾಕತನ ಹೆಚ್ಚಾಗುತ್ತಿದೆ. ಬೇಡವಾದ ವಸ್ತುವನ್ನು ಇಲ್ಲದ ದುಡ್ಡಿನಲ್ಲಿ (ಕ್ರೆಡಿಟ್ ಕಾರ್ಡ್) ತಗೊಂಡು ಗೊತ್ತಿಲ್ಲದ ಜನರು ಮೆಚ್ಚುವಂತೆ ನಾವು ಬದುಕು ನಡೆಸುತ್ತಿದ್ದೇವೆ ಎಂದು ವಿಷಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.