ಬೆಂಗಳೂರು: ರೇಷ್ಮೆ ಗೂಡು ಮತ್ತು ರೇಷ್ಮೆ ನೂಲಿನ ದರ ಕುಸಿತದಿಂದ ಆತಂಕಕ್ಕೆ ಒಳಗಾಗಬಾರದು ಎಂದು ರೈತರಲ್ಲಿ ಮನವಿ ಮಾಡಿರುವ ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಮಾರುಕಟ್ಟೆಗಳಲ್ಲಿ ಸೋಮವಾರದಿಂದ ಎಂದಿನಂತೆ ಖರೀದಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ರೇಷ್ಮೆ ದರ ಕುಸಿತ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರೇಷ್ಮೆ ಖರೀದಿಗಾಗಿ ರೇಷ್ಮೆ ಮಾರಾಟ ಮಂಡಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮಂಡಳಿಯು ಸೋಮವಾರದಿಂದ ಹಿಂದಿನಂತೆಯೇ ರೇಷ್ಮೆ ಖರೀದಿ ಪ್ರಕ್ರಿಯೆ ನಡೆಸಲಿದೆ’ ಎಂದು ಭರವಸೆ ನೀಡಿದ್ದಾರೆ.
ಒಂದು ವಾರದಿಂದ ರಾಜ್ಯದ ರೇಷ್ಮೆ ಗೂಡು ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದ ಉತ್ಪನ್ನ ಪೂರೈಕೆಯಾಗಿದೆ. ಈ ಕಾರಣದಿಂದಾಗಿ ರೇಷ್ಮೆ ಗೂಡು ಮತ್ತು ನೂಲಿನ ದರ ಕುಸಿದಿತ್ತು. ಖಾಸಗಿ ವರ್ತಕರು ಖರೀದಿಗೆ ಆಸಕ್ತಿ ತೋರದೆ ಇದ್ದುದು ಕೂಡ ಇದಕ್ಕೆ ಕಾರಣವಾಗಿತ್ತು ಎಂದು ಹೇಳಿದ್ದಾರೆ. ರಾಜ್ಯ ರೇಷ್ಮೆ ಮಾರಾಟ ಮಂಡಳಿಯು ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಎರಡು ದಿನಗಳಿಂದ ರೇಷ್ಮೆ ಗೂಡು ಮತ್ತು ನೂಲಿನ ಖರೀದಿಯನ್ನು ಸ್ಥಗಿತಗೊಳಿಸಿತ್ತು. ಈ ವಿಷಯ ಗಮನಕ್ಕೆ ಬಂದ ತಕ್ಷಣ ಮಂಡಳಿಗೆ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿತ್ತು. ಮುಖ್ಯಮಂತ್ರಿಯವರಿಗೂ ಈ ವಿಷಯ ತಿಳಿಸಲಾಗಿತ್ತು. ಮಂಡಳಿಯ ಸಮಸ್ಯೆ ನಿವಾರಣೆ ಆಗಿದ್ದು, ಎಂದಿನಂತೆ ವಹಿವಾಟು ಮುಂದುವರೆಯಲಿದೆ.