ಅನಂತ ಪದ್ಮನಾಭ ದೇವಸ್ಥಾನದಲ್ಲಿ ಊಹೆ ಗೂ ನಿಲುಕದ ಸಂಪತ್ತು ಇದೆ ಎಂತಲೂ, ಬಿ-ನೆಲಮಾಳಿಗೆ ತೆರೆಯಲು ದೇವ ಸಮ್ಮತ ಇಲ್ಲ ಎಂದು ಮಧೂರು ನಾರಾಯಣ ರಂಗಭಟ್ ಹೇಳಿದ್ದಾರೆ ಎಂದು ವರದಿಯಾಗಿದೆ (ಪ್ರವಾ ಆ.21).
ಆ ನಿಧಿಯನ್ನು ಕಾಪಾಡಲು ಸಾಕ್ಷಾತ್ ನರಸಿಂಹಸ್ವಾಮಿಯೇ ಕಾವಲಿದ್ದಾನಂತೆ! ನಿಧಿ ತೆಗೆಯಲು ಪ್ರಯತ್ನಿಸಿದರೆ ಸ್ವಾಮಿಗೆ ಕೋಪ ಬರುವುದಂತೆ, ನಿಯಂತ್ರಿಸಲಾಗದ ಅನಾಹುತಗಳು ಆಗುವುದಂತೆ. ಹಾಗಂತೆ-ಹೀಗಂತೆ ಎಂದು ಹೆದರಿಸುತ್ತಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ವೈಜ್ಞಾನಿಕವಾಗಿ ಇಲ್ಲ, ಸುಳ್ಳಿನ ಕಂತೆಗಳೇ ಜಾಸ್ತಿ. ಅದನ್ನು ನಂಬುವ ಅವಶ್ಯಕತೆ ಇಲ್ಲ.
ದೇವರಿಗೆ ಇಷ್ಟೆಲ್ಲಾ ಹಣ-ಆಸ್ತಿ-ಸಂಪತ್ತು ಕೊಟ್ಟಿರುವುದು ಮನುಷ್ಯನೇ, ಈ ಮನುಷ್ಯನ ಸಂಪತ್ತು ಮನುಷ್ಯನಿಗೇ ಕೊಡಲು ಅವನೇಕೆ ಕೋಪ ಮಾಡಿಕೊಳ್ಳುತ್ತಾನೆ. ಕೋಪ ಬರುವುದು ಪಾಮರ ಪಂಡಿತರಿಗೆ, ಪುರೋಹಿತರಿಗೆ ಹಾಗೂ ಅರ್ಚಕರಿಗೆ. ದೇವರು ಕರುಣಾಮಯಿ ಎಂದು ಹೇಳಿ, ಹೆದರಿಸುತ್ತಾನೆ ಎಂದರೆ, ತೊಂದರೆ ಕೊಡುತ್ತಾನೆ ಎಂದರೆ ಒಪ್ಪಲು ಸಾಧ್ಯವೇ? ನಮ್ಮ ದೇಶದಲ್ಲಿ ಅನೇಕ ಕಡೆ ದೇವಸ್ಥಾನಗಳಲ್ಲಿ ಕಳ್ಳತನಗಳು ನಡೆಯುತ್ತಲೇ ಇವೆ. ಆ ದೇವರು ಯಾರಿಗೂ ಶಿಕ್ಷೆ ಕೊಟ್ಟದನ್ನು ನಾವು ನೋಡಿಲ್ಲ ಕೇಳಿಲ್ಲ. ನಮ್ಮ ದೇಶವನ್ನು ದೇವರು ಎನ್ನಿಸಿಕೊಂಡ ವಿಗ್ರಹಗಳೇ ಕಾಪಾಡುವುದಾದರೇ ಪೊಲೀಸ್ ಪಡೆ ಬೇಡ. ಮಿಲಿಟರಿಯೂ ಬೇಡ. ಹೀಗಿರುವಾಗ ಇಂತಹ `ದೈವಜ್ಞ~ರ ಮಾತಿಗೆ ಬೆಲೆ ಉಂಟೆ?