ಹುಮನಾಬಾದ್: ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 9ರ ಮೇಲೆನ ಡಾಬಾಗಳಲ್ಲಿ ಉಳ್ಳಾಗಡ್ಡೆ ರಹಿತ ಊಟ ನೀಡುತ್ತಿರುವುದು ಗ್ರಾಹಕರ ಅತೃಪ್ತಿಗೆ ಕಾರಣವಾಗಿದೆ.
ಮಸಾಲೆಯುಕ್ತ ರುಚಿಕರ ಊಟಕ್ಕೆ ರಾಷ್ಟ್ರೀಯ ಹೆದ್ದಾರಿ 9ರ ಹುಮನಾಬಾದ್ ಸುತ್ತಲಿನ ಡಾಬಾಗಳು ಎಲ್ಲಡೆ ಪ್ರಸಿದ್ದ. ಮುಂಬೈನಿಂದ ಹೈದರಾಬಾದ್, ಬೀದರ್ನಿಂದ- ಗುಲ್ಬರ್ಗ, ಬೆಂಗಳೂರು ತೆರಳುವ ಮಾರ್ಗ ಮಧ್ಯೆ ಹುಮನಾಬಾದ್ ಡಾಬಾಗಳಲ್ಲಿ ತಪ್ಪದೇ ಊಟದ ರುಚಿ ಸವಿಯುವುದು ಎಲ್ಲರಿಗೂ ಗೊತ್ತಿರುವ ವಿಷಯ. ಊಟ ಆರಂಭಗೊಳ್ಳುವ ಮುನ್ನ ಸಣ್ಣತಟ್ಟೆ ಒಂದರಲ್ಲಿ ಉಳ್ಳಾಗಡ್ಡೆ, ನಿಂಬೆಹಣ್ಣು ಕತ್ತರಿಸಿ ಟೇಬಲ್ ಮೇಲೆ ತಂದಿಡುವುದು ವಾಡಿಕೆ. ಊಟ ಆರ್ಡ್ರ ಮಾಡಿದ ನಂತರ ಟೇಬಲ್ ಮೇಲೆ ಬರುವದಕ್ಕೆ ಕೊಂಚ ವಿಳಂಬ ಆಗುತ್ತ. ಆ ಸಮಯ ಕಳೆಯಲು ಮತ್ತು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂಬ ಕಾರಣಕ್ಕಾಗಿ ಕತ್ತರಿಸಿದ ಉಳ್ಳಾಗಡ್ಡೆ ಮೇಲೆ ಪುಡಿಕಾರ ಸಿಂಪಡಿಸಿ, ಮೇಲೆ ಲಿಂಬೆಹಣ್ಣಿನ ರಸ ಹಿಂಡಿ ತಿನ್ನುವುದು ವಾಡಿಕೆ. ಇದು ತಿನ್ನುವುದರಿಂದ 15ರಿಂದ20 ನಿಮಿಷ ಸಮಯ ಕಳೆದದ್ದು ಗೊತ್ತಾಗುವುದಿಲ್ಲ ಎಂಬ ಕಾರಣಕ್ಕಾಗಿ ಇತ್ತೀಚನ ಹೊಸ ಪೀಳಿಗೆ ಇದನ್ನು ಟೈಂಪಾಸ್ ಐಟಂ ಎಂದೇ ಕರೆಯುತ್ತದೆ.
ಗ್ರಾಹಕರ ಅತೃಪ್ತಿ: ಆದರೇ ಎರಡು ದಶಕದಿಂದ ಕಡ್ಡಾಯವಾಗಿ ಕೊಡುತ್ತಿದ್ದ ಉಳ್ಳಾಗಡ್ಡೆ(ಇರುಳ್ಳಿ) ಕಳೆದ ಒಂದುವರೆ ತಿಂಗಳಿಂದ ಏಕಾಏಕಿ ಸ್ಥಗಿತಗೊಳಿಸಿರುವುದು ಗ್ರಾಹಕರ ಅತೃಪ್ತಿಗೆ ಕಾರಣವಾಗಿದೆ. ಉಳ್ಳಾಗಡ್ಡೆ ಕೊಡದೇ ಇರುವುದರಿಂದ ಊಟದ ಸವಿ ಸಂಪೂರ್ಣ ನೆಲಕಚ್ಚಿದೆ ಎನ್ನುವುದು ಗ್ರಾಹಕರ ಅಭಿಪ್ರಾಯ. ಉಳ್ಳಾಗಡ್ಡೆ ಕೊಡುವುದನ್ನು ಇದೇ ರೀತಿ ಮುಂದುವರೆಸಿದಲ್ಲಿ ಡಾಬಾ ಊಟ ಸ್ಥಗಿತಗೊಳಿಸುವುದು ಅನಿವಾರ್ಯವಾಗುತ್ತದೆ ಎನ್ನುತ್ತಾರೆ ತಾಲ್ಲೂಕಿನ ನಿರ್ಣಾದಿಂದ ವಾರಕ್ಕೊಮ್ಮೆ ಹುಮನಾಬಾದ್ಗೆ ಆಗಮಿಸುವ ಮಲ್ಲಿಕಾರ್ಜುನ ಕಾಶೆಂಪೂರ, ಲಕ್ಷ್ಮಣ ಸಾತನೂರ, ಮಖ್ಬುಲ್ ಮನ್ನಾಎಖ್ಖೆಳ್ಳಿ, ಶೈಲೇಂದ್ರ ಪಾಟೀಲ ಮೊದಲಾದವರು.
ದರ ಏರಿಕೆ ಕಾರಣ: ಒಂದುವರೆ ತಿಂಗಳ ಮುಂಚೆ ಕೆ.ಜಿ ಉಳ್ಳಾಗಡ್ಡೆ ಬೆಲೆ ರೂ. 8ರಿಂದ 10ಇತ್ತು. ಆ ಬೆಲೆ ಈಗ ರೂ. 50-60ಕ್ಕೆಹೆಚ್ಚಿದೆ.ಪರಿಸ್ಥಿತಿ ಹೀಗಿರುವಾಗ ಗ್ರಾಹಕರಿಗೆ ಮೊದಲಿನಂತೆ ಉಳ್ಳಾಗಡೆ ನೀಡುವುದು ಅಸಾಧ್ಯವಾಗುತ್ತಿದೆ. ಊಟಕ್ಕಿಂಟ ಉಳ್ಳಾಗಡ್ಡೆ ಬಿಲ್ ಹೆಚ್ಚಾಗುತ್ತದೆ. ಗ್ರಾಹಕ ಆ ಬೆಲೆ ನೀಡುವುದಿಲ್ಲ ಎನ್ನುವುದನ್ನು ಮನಗಂಡು ಖುದ್ದಾಗಿ ಇರುಳ್ಳಿ ನೀಡುವುದನ್ನು ಸ್ಥಗಿತಗೊಳಿಸಿದ್ದೇವೆ ಎನ್ನುವುದು ಡಾಬಾ ಮಾಲೀಕರ ಅಂಬೋಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.