ಹೈದರಾಬಾದ್ (ಪಿಟಿಐ): `ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಆಕರ್ಷಕ ಶೈಲಿಯ ಉಡುಪು ಕೂಡ ಒಂದು ಕಾರಣವೇ ಹೊರತು ಅದರಿಂದಲೇ ಅಂತಹ ಪ್ರಕರಣಗಳು ಘಟಿಸುತ್ತವೆ ಎಂಬುದಾಗಿ ನಾನು ಹೇಳಿಲ್ಲ~ ಎಂದು ಆಂಧ್ರ ಪ್ರದೇಶದ ಡಿಜಿಪಿ ವಿ.ದಿನೇಶ್ ರೆಡ್ಡಿ ಬುಧವಾರ ಸ್ಪಷ್ಟೀಕರಣ ನೀಡಿದ್ದಾರೆ.
ಸಿನಿಮೀಯ ಮತ್ತು ಆಕರ್ಷಕ ಶೈಲಿಯ ಪ್ರಚೋದನಕಾರಿ ಉಡುಪು ಧರಿಸುವುದು ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದಕ್ಕೆ ಮುಖ್ಯ ಕಾರಣ ಎಂದು ಇತ್ತೀಚೆಗೆ ಹೇಳಿಕೆ ನೀಡಿ ಅವರು ವಿವಾದಕ್ಕೆ ಒಳಗಾಗಿದ್ದರು. ಅವರ ಈ ಹೇಳಿಕೆಯ ಬಗ್ಗೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿ ಕಟುವಾದ ಶಬ್ದಗಳಲ್ಲಿ ಖಂಡಿಸಿದ್ದವು.
ಮಹಿಳೆಯರನ್ನು ಕೀಳಾಗಿ ಬಿಂಬಿಸುವ ಯಾವುದೇ ಉದ್ದೇಶ ತಮಗಿರಲಿಲ್ಲ ಮತ್ತು ಸಾಮಾಜಿಕ ಅಧ್ಯಯನದ ಹಿನ್ನೆಲೆಯಲ್ಲಿ ಈ ರೀತಿಯ ಹೇಳಿಕೆ ನೀಡ್ದ್ದಿದೇನೆ ಎಂದು ರೆಡ್ಡಿ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಮಹಿಳೆಯರು ಧರಿಸುವ ಪ್ರಚೋದನಕಾರಿ ಉಡುಪು ಕೂಡ ಒಂದು ಕಾರಣ ಎಂದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಈ ಹಿಂದೆ ಹೇಳಿರುವುದು ಮತ್ತು ಸಾಮಾಜಿಕ ಅಧ್ಯಯನದ ಹಿನ್ನೆಲೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾಗಿ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವಿವಾದ ಹುಟ್ಟಿಕೊಳ್ಳಲು ಮಾಧ್ಯಮಗಳೇ ಕಾರಣ ಎಂದು ದೂರಿರುವ ಅವರು, ಕೆಲ ಸ್ವಹಿತಾಸಕ್ತಿಗಳು ಇಂತಹ ವಿಷಯವನ್ನು ಗಾಳಿಯಲ್ಲಿ ತೇಲಿ ಬಿಡುತ್ತವೆ. ಇದರಿಂದ ಸಮಾಜಕ್ಕೆ ಯಾವುದೇ ಒಳಿತಾಗುವುದಿಲ್ಲ ಎಂದಿದ್ದಾರೆ.