ಮೈಸೂರು: ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರವ ಐದು ಮಂದಿ ಸಾಧಕರನ್ನು ಕರ್ನಾಟಕ ಕಾವಲು ಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್ಕುಮಾರ್ಗೌಡ ಅವರ 40ನೇ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಸನ್ಮಾನಿಸಲಾಯಿತು.
ಕುವೆಂಪು ನಗರದ ಬಂದಂತೆಮ್ಮ ದೇವಸ್ಥಾನದ ಪ್ರಾಂಗಣದಲ್ಲಿ ಸಾಧಕರಾದ ನೀಲಮ್ಮ, ಚನ್ನಪ್ಪ, ಕೆ.ಆರ್.ಗುರುಕಾರ್, ಶಿವಣ್ಣ, ಮಹಾದೇವ್, ಟಿ.ಜೆ.ಫಿಲೋಮಿನಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ನೀಲಮ್ಮ ಅವರು ಕಳೆದ ಹಲವಾರು ವರ್ಷಗಳಿಂದ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸರಸ್ವತಿಪುರಂ ನಿವಾಸಿ ಶಿವಣ್ಣ ಕುಕ್ಕರಹಳ್ಳಿ ಕೆರೆ ಹಾಗೂ ಸುತ್ತಮುತ್ತ ಆತ್ಮಹತ್ಯೆ ಮಾಡಿಕೊಂಡಿರುವವರ ಶವಗಳನ್ನು ಮೇಲೆತ್ತುವ ಕಾಯಕದಲ್ಲಿ ನಿರತರಾಗಿದ್ದರೆ, ಟಿ.ಜೆ.ಫಿಲೋಮಿನಾ ಅವರು ಕೆ.ಆರ್.ಆಸ್ಪತ್ರೆಯ ಸುಟ್ಟ ಗಾಯಗಳ ವಾರ್ಡ್ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಗುರುಕಾರ್ ಅವರು ನಿವೃತ್ತ ಎಂಜಿನಿಯರಾಗಿದ್ದು, ನಗರದ ವಿವಿಧ ರಸ್ತೆಗಳ ಬದಿ ಸಾವಿರಾರು ಸಂಖ್ಯೆಯಲ್ಲಿ ಸಸಿ ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಕೆ.ಜಿ.ಕೊಪ್ಪಲು ನಿವಾಸಿ ಮಹಾದೇವ್ ಅವರು ವ್ಯವಹಾರಿಕ ರೀತಿಯಲ್ಲಿ ವರ್ತಿಸದೇ ಸಂಪ್ರದಾಯ ಬದ್ಧವಾಗಿ ಶವ ಸಂಸ್ಕಾರ ಮಾಡುವಲ್ಲಿ ಗುರುತಿಸಿಕೊಂಡಿದ್ದಾರೆ. ಕೆ.ಜಿ.ಕೊಪ್ಪಲಿನ ಮತ್ತೊಬ್ಬ ಸಾಧಕರಾದ ಚನ್ನಪ್ಪ ಅವರೂ ಉಚಿತ ಶವ ಸಂಸ್ಕಾರ ಕಾರ್ಯವನ್ನು ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನದ ಮೈಸೂರು ಶಾಖಾ ಮಠದ ಪೀಠಾಧ್ಯಕ್ಷ ಸೋಮನಾಥ್ ಸ್ವಾಮೀಜಿ, ಮೇಯರ್ ಪುಷ್ಪಲತಾ ಟಿ.ಬಿ ಚಿಕ್ಕಣ್ಣ, `ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ, ಸನ್ಮಾನಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರವುದು ಶ್ಲಾಘನೀಯ~ ಎಂದು ಶುಭ ಹಾರೈಸಿದರು.
ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಉದ್ಯಮಿ ಬೋರಯ್ಯ, ಉಪ ಮೇಯರ್ ಎಂ.ಜೆ.ರವಿಕುಮಾರ್, ಕಾವಲು ಪಡೆಯ ರಾಜ್ಯ ಉಪಾಧ್ಯಕ್ಷ ಟಿ.ರವಿಗೌಡ, ರಾಜ್ಯ ಕಾರ್ಯದರ್ಶಿ ಡಿ.ಆರ್.ಕರಿಗೌಡ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.