ಕಾನ್ಪುರ/ನವದೆಹಲಿ (ಪಿಟಿಐ): `ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುಮತ ಸಿಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಸಾಧ್ಯತೆ ಇದೆ~ ಎಂದು ಕೇಂದ್ರ ಸಚಿವ ಶ್ರಿಪ್ರಕಾಶ ಜೈಸ್ವಾಲ್ ಗುರುವಾರ ಹೇಳಿದ್ದಾರೆ. ಸಚಿವರ ಈ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ.
`ಕಾಂಗ್ರೆಸ್ ಬಹುಮತ ಪಡೆದರೆ ಅದು ಸರ್ಕಾರ ರಚಿಸಲಿದೆ. ಒಂದು ವೇಳೆ ಸ್ಪಷ್ಟ ಬಹುಮತ ಬರದೇ ಇದ್ದಲ್ಲಿ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಗುವುದು ಮತ್ತು ರಾಜ್ಯಪಾಲರ ಆಡಳಿತದ ಹೊರತು ನನಗೆ ಬೇರೆ ದಾರಿಗಳಿಲ್ಲ~ ಎಂದು ಮತದಾನ ಮಾಡಿದ ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದರು.
`ಭರವಸೆ ಕಳೆದುಕೊಂಡವರು ಮೈತ್ರಿಯತ್ತ ಕಣ್ಣಿಟ್ಟಿದ್ದಾರೆ, ಆದರೆ ಕಾಂಗ್ರೆಸ್ ಯಾವುದೇ ಮೈತ್ರಿ ಬೇಕಿಲ್ಲ~ ಎಂದು ಅವರು ಹೇಳಿದರು.
ಸರ್ಕಾರ ರಚಿಸುವಲ್ಲಿ ಯಾವ ಪಕ್ಷದಿಂದಲೂ ಸಾಧ್ಯವಾಗದೇ ಇದ್ದಲ್ಲಿ ಸಂವಿಧಾನಾತ್ಮಕ ಸಾಧ್ಯತೆಗಳ ಕುರಿತು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.
`ಸಂವಿಧಾನದಲ್ಲಿ ಏನು ನಮೂದಿಸಿದೆ ಎನ್ನುವುದನ್ನು ನಾನು ಅವರಿಗೆ ಹೇಳಿದ್ದೇನೆ. ಇಂಥ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತವೇ ಜಾರಿಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದರು. ಸಚಿವರ ಈ ಹೇಳಿಕೆಗೆ ಪ್ರತಿ ಪಕ್ಷಗಳಿಂದ ತೀಕ್ಷ್ಣ ಪ್ರತಿಕ್ರಿಯಿಸಿವೆ. ಈ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಮತ್ತು ಮತದಾರರನ್ನು ಬೆದರಿಸುವಂಥದ್ದಾಗಿದೆ ಎಂದು ಹೇಳಿವೆ.
ಸ್ಪಷ್ಟ ಬಹುಮತ ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾದರೆ, ಅತೀ ಹೆಚ್ಚು ಸ್ಥಾನ ಪಡೆದ ಪಕ್ಷವನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸುತ್ತಾರೆ. `ನಮಗೆ 10 ಅಥವಾ 5 ಸ್ಥಾನಗಳು ಕಡಿಮೆ ಬಿದ್ದರೆ ಸ್ವತಂತ್ರ ಮತ್ತು ಸಣ್ಣ ಪಕ್ಷಗಳು ನಮಗೆ ಬೆಂಬಲಿಸಲಿವೆ~ ಎಂದರು.
ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ:
ಸಚಿವರ ಈ ಹೇಳಿಕೆ ಪ್ರತಿ ಪಕ್ಷಗಳಿಂದ ತೀಕ್ಷ್ಣ ಪ್ರತಿಕ್ರಿಯಿಸಿವೆ. ಈ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಮತ್ತು ಮತದಾರರನ್ನು ಬೆದರಿಸುವಂಥದ್ದಾಗಿದೆ ಎಂದು ಬಿಜೆಪಿ ನಾಯಕಿ ಉಮಾಭಾರತಿ ಹೇಳಿದ್ದಾರೆ.
ಅವರು ರಾಷ್ಟ್ರಪತಿ ಆಡಳಿತದ ಬೆದರಿಕೆ ಹಾಕುತ್ತಿದ್ದು, ಮತದಾರರು ಕಾಂಗ್ರೆಸ್ಗೆ ಬೆಂಬಲಿಸಬಾರದು ಮತ್ತು ಮತದ ಮಹತ್ವವನ್ನು ಕಾಂಗ್ರೆಸ್ ಅರಿತುಕೊಂಡಿಲ್ಲ ಎಂದು ಉಮಾ ಸ್ಪರ್ಧಿಸಿರುವ ಚರ್ಖಾರಿಯಲ್ಲಿ ಹೇಳಿದ್ದಾರೆ.
ಚುನಾವಣಾ ಆಯೋಗಕ್ಕೆ ದೂರು:ಜೈಸ್ವಾಲ್ ಈ ಹೇಳಿಕೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಕಾಂಗ್ರೆಸ್ ಆಕ್ಷೇಪ:ಜೈಸ್ವಾಲ್ ಹೇಳಿಕೆಯನ್ನು ಕಾಂಗ್ರೆಸ್ ತನ್ನ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರ ರಚನೆಗೆ ನಾವು ಹೋರಾಡುತ್ತಿದ್ದೇವೆ ಎಂದರು. ಜೈಸ್ವಾಲ್ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ ಮತ್ತು ವಿಷಯವನ್ನು ಇಲ್ಲಿಗೆ ಕೈಬಿಡುವುದು ಒಳಿತು ಎಂದರು.
ತಮ್ಮ ಹೇಳಿಕೆ ವಿವಾದ ಸೃಷ್ಟಿಸಿದ್ದರಿಂದ ಎಚ್ಚೆತ್ತುಕೊಂಡ ಜೈಸ್ವಾಲ್, ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇದ್ದಾಗ ಸಂವಿಧಾನಾತ್ಮಕ ಸಾಧ್ಯತೆಗಳ ಬಗ್ಗೆ ಮಾತ್ರ ಹೇಳಿದ್ದೇನೆ ಎಂದು ಮೊದಲಿನ ಹೇಳಿಕೆಯನ್ನು ಬದಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.