ಲಕ್ಷ್ಮೇಶ್ವರ: ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಸಮೀಪದ ಬಾಳೇ ಹೊಸೂರು ಗ್ರಾಮದ ಹೊರ ವಲಯ ದಲ್ಲಿ ₨ 85 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ವಾಗಿ ಒಂದು ವರ್ಷ ಕಳೆದಿದ್ದರೂ ಅದಕ್ಕೆ ಉದ್ಘಾಟನೆ ಭಾಗ್ಯ ಮಾತ್ರ ಕೂಡಿ ಬಂದಿಲ್ಲ.
ದಾನಿಗಳ ಹೆಸರು ಇಡುವ ಸಂಬಂಧ ಉದ್ಭವಿಸಿದ ಸಮಸ್ಯೆಯೇ ಆಸ್ಪತ್ರೆ ಆರಂಭ ಆಗದಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಈ ಮೊದಲು ಆರೋಗ್ಯ ಇಲಾಖೆ ಯಲ್ಲಿ ಸೇವೆ ಸಲ್ಲಿಸಿ ಸಧ್ಯ ನಿವೃತ್ತ ಜೀವನ ನಡೆಸುತ್ತಿರುವ ಬಾಳೇಹೊಸೂರು ಗ್ರಾಮದ ನಿವಾಸಿ ಫಕ್ಕೀರೇಶ ಹನಮಪ್ಪ ಸಾಲಿ ಇವರು ಆಸ್ಪತ್ರೆಗೆ ತಮ್ಮ ಹೆಸರನ್ನೇ ನಾಮಕರಣ ಮಾಡಬೇಕು ಎಂಬ ಷರತ್ತಿನ ಮೇರೆಗೆ ಸ್ವಂತದ ಎರಡು ಎಕರೆ ಜಮೀನನ್ನು ಆಸ್ಪತ್ರೆ ನಿರ್ಮಾಣಕ್ಕೆ ಬಿಟ್ಟು ಕೊಟ್ಟಿದ್ದರು.
ಭೂ ದಾನಿಗಳ ಷರತ್ತಿಗೆ ಒಪ್ಪಿ ಸಂಬಂಧಿಸಿದ ಇಲಾಖೆ ಸೂರಣಗಿ ರಸ್ತೆಗೆ ಹೊಂದಿಕೊಂಡಂತೆ ಭವ್ಯವಾದ ಆಸ್ಪತ್ರೆ ನಿರ್ಮಿಸಿದೆ. ಆದರೆ ನಾಮಕರಣ ಪ್ರಕ್ರಿಯೆ ಈಗ ಸಂಪೂರ್ಣವಾಗಿ ನೆನೆ ಗುದಿಗೆ ಬಿದ್ದಿದ್ದು ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ದೂರು ತ್ತಿದ್ದಾರೆ.
ಊರಲ್ಲಿ ದವಾಖಾನೆ ಇದ್ದರೂ ಅದು ಜನತೆಯ ಉಪಯೋಗಕ್ಕೆ ಬಾರದಿರು ವುದು ಇಲ್ಲಿನ ಜನರ ದೌರ್ಭಾಗ್ಯವೇ ಎನ್ನಬಹುದು. ಹೀಗಾಗಿ ಆರೋಗ್ಯ ಸೇವೆ ಗ್ರಾಮಸ್ಥರಿಗೆ ಮರೀಚಿಕೆ ಆಗಿದ್ದು ಇದ ಕ್ಕಾಗಿ ಅವರು ಬೇರೆ ಊರಿನ ಆಸ್ಪತ್ರೆ ಗಳತ್ತ ಮುಖ ಮಾಡುವ ಅನಿವಾ ರ್ಯತೆ ಉಂಟಾಗಿದೆ.
‘ನಮ್ಮೂರಾಗ ದೊಡ್ಡ ದವಾಖಾನಿ ಕಟ್ಟ್ಯಾರ. ಆದರ ಅದು ಇನ್ನೂ ಚಾಲೂನ ಆಗಿಲ್ಲ. ಹಿಂಗಾಗಿ ನಮ್ಮೂರಿನ ಪೇಸೆಂಟ್ ಬ್ಯಾರೆ ಕಡೆ ಹೊಂಟಾರ. ಜಿಲ್ಲಾಧಿಕಾರಿಗಳು ಲಗೂನ ದವಾಖಾನಿ ಚಾಲೂ ಮಾಡಾಕ ಕ್ರಮಕೈಗೊಳ್ಳಬೇಕು’ ಎಂದು ಗ್ರಾಮದ ಯುವಕ ಶಿವಣ್ಣ ಕಬ್ಬೇರ ಹೇಳುತ್ತಾರೆ.
ಈಗ ಚಳಿಗಾಲ. ಗ್ರಾಮಸ್ಥರು ನಿತ್ಯ ಒಂದಿಲ್ಲೊಂದು ರೋಗಕ್ಕೆ ತುತ್ತಾ ಗುತ್ತಿದ್ದು ಆಸ್ಪತ್ರೆ ಆರಂಭವಾಗದ ಕಾರಣ ಚಿಕಿತ್ಸೆ ದೊರೆಯದೆ ಅವರು ಸಂಕಟ ಪಡುತ್ತಿದ್ದಾರೆ. ಗ್ರಾಮದ ಅನಾರೋಗ್ಯ ಪೀಡಿತರು ಸಧ್ಯ ಸೂರಣಗಿ ಅಥವಾ ದೂರದ ಲಕ್ಷ್ಮೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರಬೇಕಾಗಿದೆ. ಆದರೆ ಇದು ಎಲ್ಲರಿಂದ ಸಾಧ್ಯವಿಲ್ಲ. ಕಾರಣ ಗ್ರಾಮಸ್ಥರಲ್ಲಿ ಹೆಚ್ಚಿನವರು ಬಡವರು. ಲಕ್ಷ್ಮೇಶ್ವರಕ್ಕೆ ಬಂದು ಹೋಗ ಬೇಕಾದರೆ ನೂರಾರು ರೂಪಾಯಿ ವೆಚ್ಚವಾಗುತ್ತದೆ.
ಇಷ್ಟೊಂದು ಹಣ ವನ್ನು ಅವರಿಂದ ಭರಿಸಲು ಸಾಧ್ಯವಿಲ್ಲ. ಊರಲ್ಲಿ ದೊಡ್ಡ ಸರ್ಕಾರಿ ಆಸ್ಪತ್ರೆ ಇದ್ದರೂ ಅದರ ಸೇವೆ ಗ್ರಾಮಸ್ಥರಿಗೆ ದೊರೆಯುತ್ತಿಲ್ಲ. ಕಾರಣ ಬಡ ಜನತೆ ಆರೋಗ್ಯ ಸೇವೆಯಿಂದ ನರಳುತ್ತಿದ್ದಾರೆ. ಬರುವ ಮಾರ್ಚ್ 7, 8 ಮತ್ತು 9ರಂದು ಬಾಳೇಹೊಸೂರಿನಲ್ಲಿ ನೂತನ ವಾಗಿ ನಿರ್ಮಾಣ ಮಾಡಿರುವ ದಿಂಗಾ ಲೇಶ್ವರಮಠದ ಕಟ್ಟಡ ಹಾಗೂ ದಾಸೋಹ ಮಂದಿರಗಳು ಲೋಕಾರ್ಪ ಣೆಗೊಳ್ಳಲಿವೆ.
ಈ ಹಿನ್ನೆಲೆಯಲ್ಲಿ ಮಠಾಧೀಶರಾದ ಕುಮಾರ ದಿಂಗಾ ಲೇಶ್ವರ ಸ್ವಾಮಿಗಳು ಮೂರು ದಿನಗಳ ವರೆಗೆ ಅನೇಕ ಧಾರ್ಮಿಕ ಕಾರ್ಯ ಕ್ರಮಗಳನ್ನು ಸಂಘಟಿಸಿದ್ದು ಲಕ್ಷಾಂತರ ಭಕ್ತರು ಗ್ರಾಮದಲ್ಲಿ ಸೇರುವ ನಿರೀಕ್ಷೆ ಇದೆ. ಕಾರಣ ಸಮಾರಂಭ ನಡೆಯುವ ಮುನ್ನವೇ ಆಸ್ಪತ್ರೆ ಆರಂಭವಾದರೆ ಜನತೆಗೆ ಬಹಳ ಉಪಯೋಗ ಆಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಹೆಚ್ಚಿನ ಗಮನ ಹರಿಸಿ ತುರ್ತು ಸೇವೆಗಳಲ್ಲಿ ಒಂದಾಗಿರುವ ಆರೋಗ್ಯ ಸೇವೆ ಒದಗಿಸಿಕೊಡಲು ಅಧಿ ಕಾರಿಗಳಿಗೆ ಸೂಚನೆ ನೀಡಬೇಕಾಗಿದೆ.
‘ನಮ್ಮೂರಾಗ ಮಾರ್ಚ್ ತಿಂಗಳದಾಗ ದೊಡ್ಡ ಕಾರ್ಯಕ್ರಮಗಳು ಅದಾವು. ಅಷ್ಟರೊಳಗ ನಮ್ಮೂರಿನ ದವಾಖಾನಿ ಚಾಲೂ ಮಾಡಿದರ ಭಾಳ ಚಲೋ ಅಕ್ಕೈತಿ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಫಕ್ಕೀರೇಶ ಮ್ಯಾಟಣ್ಣ ವರ ಹೇಳುತ್ತಾರೆ. ಈಗಲಾದರೂ ಜಿಲ್ಲಾ ಧಿಕಾರಿಗಳು ಬಾಳೇಹೊಸೂರಿನ ಆಸ್ಪತ್ರೆ ಉದ್ಘಾಟನೆಗೆ ಸೂಕ್ತ ಕ್ರಮಕೈಗೊಳ್ಳುವರೆ ಎಂಬುದನ್ನು ಕಾದು ನೋಡಬೇಕಾಗಿದೆ.
-ನಾಗರಾಜ ಹಣಗಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.