ಬೆಂಗಳೂರು: `ಐಟಿ ಮತ್ತು ಬೆಂಗಳೂರಿನಿಂದಾಚೆಗೆ ಯೋಚಿಸಿ. ಬೇರೆ ಬೇರೆ ಪ್ರದೇಶಗಳಲ್ಲಿ ವೈವಿಧ್ಯಮಯ ವಾಣಿಜ್ಯೋದ್ಯಮಗಳನ್ನು ಸ್ಥಾಪಿಸಲು ಮುಂದಾಗಿ~ ಎಂದು ಇನ್ಫೋಸಿಸ್ ಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ಸರ್ಕಾರ ಮತ್ತು ಉದ್ಯಮಿಗಳಿಗೆ ಕರೆ ನೀಡಿದರು.
ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಗುರುವಾರ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ (ಜಿಮ್) ಉದ್ಘಾಟನಾ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
`ಸುಸ್ಥಿರ ಮತ್ತು ಸಮತೋಲನದ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರಿನ ಹೊರಗೆ ಕಾರ್ಖಾನೆಗಳನ್ನು ಸ್ಥಾಪಿಸಬೇಕಾಗಿದೆ. ಪರ್ಯಾಯ ಹೂಡಿಕೆ ಮತ್ತು ರಫ್ತು ಹೆಚ್ಚಳಕ್ಕೆ ಆದ್ಯತೆ ನೀಡಬೇಕು~ ಎಂದು ಅವರು ಸಲಹೆ ನೀಡಿದರು.
`ಜಿಮ್, ಕೈಗಾರಿಕಾ ಬೆಳವಣಿಗೆಗಾಗಿ ರಾಜ್ಯ ಸರ್ಕಾರ ಪ್ರದರ್ಶಿಸುತ್ತಿರುವ ಕ್ರಿಯಾಶೀಲ ಕಾಳಜಿಗೆ ಸಂಕೇತವಾಗಿದೆ. ಆದರೂ ಕರ್ನಾಟಕ ಕೈಗಾರಿಕಾ ರಾಜ್ಯ ಎನಿಸಿಕೊಳ್ಳಲು ಬಹುದೂರ ಸಾಗಬೇಕಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.
ಮೂರು ಸೂತ್ರ: `ರಾಜ್ಯದಲ್ಲಿ ವಾಣಿಜ್ಯೋದ್ಯಮ ಸದೃಢವಾಗಿ ಬೆಳೆಯಲು ಸರ್ಕಾರ ಪಾರದರ್ಶಕ ನೀತಿಯನ್ನು ಅಳವಡಿಸಿಕೊಳ್ಳಬೇಕು, ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಬೇಕು~ ಎಂದು ಮೂರು ಸೂತ್ರಗಳನ್ನು ಮಂಡಿಸಿದರು.`ವಾಣಿಜ್ಯೋದ್ಯಮಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಸರ್ಕಾರ, ಉದ್ಯಮ ಮತ್ತು ಹೂಡಿಕೆದಾರರು ಒಟ್ಟಿಗೆ ಕೆಲಸ ಮಾಡಬೇಕು~ ಎಂದು ಅವರು ತಿಳಿಸಿದರು.