ಚಿಕ್ಕಮಗಳೂರು: ಉದ್ಯೋಗ ಖಾತರಿ ಯೋಜನೆಯಡಿ ಆಗಿರುವ ಭ್ರಷ್ಟಾಚಾರ ಹಗರಣಗಳ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾ ಗುವುದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದರು.
ಮಲ್ಲಂದೂರು, ಆವತಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅಹವಾಲು ಆಲಿಸಿ ಮಾತನಾಡಿದರು.
ಬ್ಯಾರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 3-4 ವರ್ಷಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ, ಕುಡಿಯುವ ನೀರು ಪೂರೈಕೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಗ್ರಾಮಸ್ಥರು ದೂರು ನೀಡಿದಾಗ, ಸಂಸದರು, ಹಿಂದೆಲ್ಲ ಕಾಮಗಾರಿಗಾಗಿ ಗುತ್ತಿಗೆದಾ ರರಿದ್ದರು. ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆ ದಾರರಿ ಗಾಗಿ ಕಾಮಗಾರಿ ಸೃಷ್ಟಿಸಿದ್ದಾರೆ. ಈ ಕೂಗು ರಾಜ್ಯದಾದ್ಯಂತ ಇದೆ ಎಂದರು.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿ, ಇದಕ್ಕೆ ಇದ ರಲ್ಲಾಗಿರುವ ಅವ್ಯವಹಾರಕ್ಕೆ ಸಹಕರಿ ಸಿದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಈ ಯೋಜನೆಯಡಿ ಹಿಂದಿನ ತಪ್ಪುಗಳು ಮರುಕಳಿಸಲು ಅವಕಾಶ ನೀಡದಂತೆ ಗುತ್ತಿಗೆದಾರರಿಗೆ ಹಣ ಪಾವತಿಸುವುದನ್ನು ಬಿಟ್ಟು ನೇರವಾಗಿ ಕೆಲಸ ಮಾಡಿದವರ ಖಾತೆಗೆ ಸಂಬಳ ಜಮಾ ಮಾಡುವ ಯೋಜನೆ ರೂಪಿಸ ಲಾಗುತ್ತಿದೆ ಎಂದರು.
ಇಲ್ಲಿನ ಆಸ್ಪತ್ರೆ ಮೇಲ್ದರ್ಜೆ ಗೆರಿಸುವುದು ಮತ್ತು ವೈದ್ಯರ ಕೊರತೆ ನೀಗಿಸಬೇಕು. ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬಾರದಿರುವುದರ ಬಗ್ಗೆ ಸಂಸದರ ಗಮನ ಸೆಳೆದಾಗ ಉತ್ತರಿಸಿದ ಹೆಗ್ಡೆ, ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ ಸ್ಕ್ಯಾನಿಂಗ್ ಸೆಂಟರ್ ನೀಡುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ.
ಗ್ರಾಮಾಂತರ ಪ್ರದೇಶದ ಆಸ್ಪತ್ರೆ ಮತ್ತು ಶಾಲೆಗಳಲ್ಲಿ ಕೆಲಸ ಮಾಡುವವರು ಸ್ಥಳೀಯವಾಗಿ ಜನರಿಗೆ ಸಹಕರಿಸಿ ಕೊಂಡು ಕಾರ್ಯ ನಿರ್ವಹಿಸದಿದ್ದರೆ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳು ವುದಾಗಿ ಎಚ್ಚರಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಚಂದ್ರಪ್ಪ ಮಾತನಾಡಿ, ಚುನಾವಣೆಯಲ್ಲಿ ಪರಾಭವಗೊಂಡಿದ್ದೇವೆ ಎಂದು ಹಿಂದೆ ಸರಿಯುವ ಪ್ರಶ್ನೆಯಿಲ್ಲ, ಕಾಂಗ್ರೆಸ್ನಲ್ಲಿ ಸೋತವರು ಕುಗ್ಗಿಲ್ಲ, ಗೆದ್ದವರು ಹಿಗ್ಗಿಲ್ಲ. ರಾಜ್ಯದಲ್ಲಿ ಜನ ಕಾಂಗ್ರಸ್ಗೆ ಆಶೀರ್ವ ದಿಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ನಿರಾಕರಿಸಿದ್ದಾರೆ. ಫಲಿತಾಂಶದಲ್ಲಿ ಬದ ಲಾವಣೆ ಕಂಡಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಲಾಭವಾಗುತ್ತಿತ್ತು.
ಶೋ ಪ್ರದರ್ಶಿಸುವ ರಾಜಕಾರಣಿಗಳನ್ನು ನಂಬಬೇಡಿ, ಎದುರಿನಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಹಿಂಬಾಗಿಲಿಂದ ಭ್ರಷ್ಟಾಚಾರ ಮಾಡುತ್ತಾರೆ. ನಾಟಕೀಯ ರಾಜಕಾರಣ ಬಿಡುವ ವರೆಗೂ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ. ಭ್ರಷ್ಟಾಚಾರಕ್ಕೆ ಕೈ ಒಡ್ಡದೆ ಎಂತಹ ಆಡಳಿತ ನೀಡಬಹುದು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿಸುತ್ತಿದ್ದಾರೆ ಎಂದರು.
ಜಿಲ್ಲಾ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಜನರು ನಿರಾಕರಿಸಿದ್ದು, ಜನರ ದೌರ್ಭಾಗ್ಯ. ರಾಜಕೀಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಜನರು ಪ್ರಾಮಾಣಿಕರನ್ನು ಬೆಂಬಲಿಸಿ ಕೆಟ್ಟ ರಾಜಕಾರಣಿಗಳನ್ನು ಪಕ್ಷಾತೀತವಾಗಿ ವಿರೋಧಿಸಿ ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ರಾಜಕಾರಣ ಶುದ್ದವಾಗಲು ಸಾಧ್ಯ ಎಂದರು.
ಬಡತನದ ವರ್ಗವನ್ನು ಮೇಲೆತ್ತಿ ಅವರ ಕಣ್ಣೊರೆಸುವುದು ಪ್ರಜಾ ಪ್ರಭುತ್ವದ ನೀತಿ. ಪ್ರಗತಿಪರ ಚಿಂತನೆ ಯುಳ್ಳ ರಾಹುಲ್ ಗಾಂಧಿ ಕೈ ಬಲಪಡಿ ಸಬೇಕಿದೆ ಎಂದು ಹೇಳುತ್ತಾ ಶಾಸಕ .ಬಿ.ಬಿ.ನಿಂಗಯ್ಯನವರು ಟಿಕೆಟ್ ಆಸೆಗಾಗಿ ಕಾಂಗ್ರೆಸ್ಗೆ ಬಂದಿದ್ದರು. ಅವರು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾದವರಲ್ಲ. ಕಾಂಗ್ರೆಸ್ನಲ್ಲಿ ಅಂತಹವರ ಸೇವೆ ಅಗತ್ಯವಿಲ್ಲ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಹಾಲಪ್ಪ ಗೌಡ, ಜಿಲ್ಲಾ ಉಪಾಧ್ಯಕ್ಷ ಎಚ್.ಎನ್.ಶ್ರೀಧರ್ ಮುಖಂಡರಾದ ಎ.ಕೆ. ವಸಂತೇಗೌಡ, ಕೃಷ್ಣೇಗೌಡ, ರೂಪೇಶ್, ಶಶಿಧರ್, ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್, ಎಸ್.ಪೇಟೆ ಸತೀಶ್, ರತ್ನಾ ನಾಗೇಶ್, ಜಿಲ್ಲಾ ಕಾರ್ಯದರ್ಶಿ ಎಂ.ಸಿ.ನಾಗೇಶ್, ಅಮರನಾಥ್, ಮಂಜುನಾಥಾಚಾರ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.