ದಾಂಡೇಲಿ(ಉ.ಕ.ಜಿಲ್ಲೆ): ಜೋಯಿಡಾ ತಾಲ್ಲೂಕಿನ ಉಳವಿಯ ಚನ್ನಬಸವೇಶ್ವರರ ಮಹಾರಥೋತ್ಸವ ತಾ.8ರಂದು ಸಂಜೆ 4 ಗಂಟೆಗೆ ನಡೆಯಲಿದೆ.
ಪ್ರತಿವರ್ಷ ಭಾರತ ಹುಣ್ಣಿಮೆ ಅಂಗವಾಗಿ ಮಹಾರಥೋತ್ಸವ ನಡೆಯುತ್ತದೆ. ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಹರಕೆ ಹೊತ್ತ ಭಕ್ತರು ಕಾಲ್ನಡಿಗೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಹನ್ನೊಂದು ದಿನಗಳವರೆಗೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಂದ ಉರುಳುಸೇವೆ, ಅಭಿಷೇಕ, ತುಲಾಭಾರ, ಧೀರ್ಘದಂಡ ನಮಸ್ಕಾರಗಳಂಥ ವೈಶಿಷ್ಟ್ಯಪೂರ್ಣ ಭಕ್ತಿಸೇವೆಗಳು ನಡೆಯುತ್ತವೆ. ಈ ಬಾರಿ ಜಾತ್ರೆಗೆ 2 ಲಕ್ಷಜನ ಸೇರುವ ಸಾಧ್ಯತೆಗಳಿದ್ದು, ದೇವಸ್ಥಾನದ ಟ್ರಸ್ಟ್ ಸಮಿತಿಯು ಭಕ್ತರಿಗಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ.
ತಾ.9ರಂದು ಸಂಜೆ ಬಯಲು ಕುಸ್ತಿ ಹಾಗೂ ತಾ.10ರಂದು ರಾತ್ರಿ 10 ಕ್ಕೆ ಓಕುಳಿ ರಥ ಎಳೆಯುವುದರೊಂದಿಗೆ ಜಾತ್ರಾ ಮಹೋತ್ಸವ ಕೊನೆಗೊಳ್ಳಲಿದೆ.