ಗದಗ: ಭಾರತೀಯ ವೈದ್ಯಕೀಯ ಸಂಘ (ಎಂಐಸಿ)ಕ್ಕೆ ನಾಮಕರಣ ಮಾಡಿರುವ ಗವರ್ನರ್ಗಳ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ವಾಣಿ ಶಿವಪೂರ ಆಗ್ರಹಿಸಿದರು.
‘ಭಾರತ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಭಾರತೀಯ ವೈದ್ಯಕೀಯ ಸಂಘವನ್ನು ವಿಸರ್ಜಿಸಿದೆ. ಇದರ ಮೂಲಕ ಸಂಯುಕ್ತ ಮತ್ತು ಪ್ರಜಾಸತ್ತಾತ್ಮಕ ಸದಸ್ಯರ ಬದಲಾಗಿ ವೈದ್ಯಕೀಯ ವೃತ್ತಿಯಲ್ಲಿ ಇರದ ತಾಂತ್ರಿಕ ಆಡಳಿತಾತ್ಮಕ ಪರಿಣತರನ್ನು ಗವರ್ನರ್ಗಳನ್ನಾಗಿ ನೇಮಕ ಮಾಡಲು ಯೋಜನೆ ರೂಪಿಸುತ್ತಿದೆ. ಇದರಿಂದಾಗಿ ವೈದ್ಯಕೀಯ ವೃತ್ತಿಯ ಪರಿಣಿತರ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಗವರ್ನರ್ಗಳ ನೇಮಕಾತಿಯನ್ನು ರದ್ದುಗೊಳಿಸಿ ಎಂಐಸಿಯನ್ನು ಮೂಲ ಸ್ವರೂಪಕ್ಕೆ ಮರಳಿ ತರಬೇಕು’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
‘ವೈದ್ಯಕೀಯ ಶಿಕ್ಷಣವನ್ನು ಮೂರುವರೆ ವರ್ಷಗಳ ಅವಧಿಗೆ ಪರಿವರ್ತಿಸುವುದನ್ನು ಬಿಟ್ಟು ಎಂಬಿಬಿಎಸ್ ಪದವಿಧರರ ಸಂಖ್ಯೆಯನ್ನು ಹೆಚ್ಚಿಸಲು ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕು. ಪ್ರತಿಯೊಬ್ಬ ಎಂಬಿಬಿಎಸ್ ಪದವಿಧರರು ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು ಎಂಬುದನ್ನು ಕಡ್ಡಾಯಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಧನೇಶ ದೇಸಾಯಿ, ಎಸ್.ಎನ್. ಕರೂರ, ಆರ್.ಎಸ್. ಬಳ್ಳಾರಿ, ಅನಂತ ಶಿವಪೂರ ಮತ್ತಿತರರು ಹಾಜರಿದ್ದರು.