ಮೈಸೂರು: ‘ಎಂ.ಪಿ.ಪ್ರಕಾಶ್ ಅವರು ಅಜಾತ ಶತ್ರು. ಅವರ ದೀರ್ಘ ಕಾಲದ ರಾಜಕಾರಣದಲ್ಲಿ ಯಾರೊಂದಿಗೂ ಜಗಳವಾಡಿಲ್ಲ, ಸಜ್ಜನಿಕೆ ಮೀರಿ ಮಾತನಾಡಿಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸ್ಮರಿಸಿದರು. ಮೈಸೂರಿನ ಮಾನಸಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಶುಕ್ರವಾರ ಎಂ.ಪಿ.ಪ್ರಕಾಶ್ ಅಭಿಮಾನಿಗಳ ಬಳಗ ಆಯೋಜಿಸಿದ್ದ ಸಮಾಜವಾದಿ ಎಂ.ಪಿ.ಪ್ರಕಾಶ್ ಅವರ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಪ್ರಕಾಶ್ ಕರ್ನಾಟಕ ರಾಜ್ಯ ಕಂಡ ಅಪರೂಪದ ರಾಜಕಾರಣಿ. ಅವರಿಗೆ ರಾಜ್ಯದ ಎಲ್ಲಡೆ ಅಪಾರ ಸ್ನೇಹಿತರಿದ್ದರು. ಅದು ರಾಜಕಾರಣಿಗಳಿಗಷ್ಟೆ ಸೀಮಿತವಾಗಿರಲ್ಲಿಲ್ಲ. ಅವರು ರಾಜಕೀಯ ಅಲ್ಲದೆ ಸಾಹಿತ್ಯ, ನಾಟಕ, ಸಿನಿಮಾ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು. ಅಲ್ಲದೆ ಅವರು ವಿಚಾರವಂತರಾಗಿದ್ದರು. ರಾಜಕಾರಣಿಗಳಿಗೆ ಇಷ್ಟೆಲ್ಲ ಗುಣಗಳು ಇರುವುದು ಕಡಿಮೆ’ ಎಂದರು ಹೇಳಿದರು.
‘ಎಂತಹ ಎದುರಾಳಿಗಳನ್ನು ತಮ್ಮ ಪ್ರಬುದ್ಧತೆ ಮಾತಿನ ಶೈಲಿಯಿಂದ ಮನವೊಲಿಸುವ ಗುಣ ಅವರಲ್ಲಿತ್ತು. ಆದರೆ ಈಗಿನ ರಾಜಕಾರಣಿಗಳಿಗೆ ನಾಚಿಕೆ ಸ್ವಭಾವ ಅನ್ನೋದೆ ಇಲ್ಲ. ಭಂಡ ರಾಜಕಾರಣಿಗಳಿದ್ದಾರೆ’ ಎಂದು ಟೀಕಿಸಿದರು. ವಿಧಾನಸಭಾ ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, ‘ಪ್ರಕಾಶ್ ಮಾನವತಾವಾದಿಗಳಾಗಿದ್ದರು. ಎಲ್ಲರೊಂದಿಗೆ ವಿಶ್ವಾಸದಿಂದ ಮಾತನಾಡುತ್ತಿದ್ದರು. ಅವರು ಸಂಕೋಚ ಸ್ವಭಾವ ಹೊಂದಿದ್ದರಿಂದಲೇ ಅವರಿಗೆ ಹಿನ್ನಡೆಯಾಯಿತು. ಅವರು ಜನಪ್ರಿಯತೆಯನ್ನು ಹೊಂದಿದ್ದರೂ ಅಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಲಿಲ್ಲ’ ಎಂದರು.
ಜನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ‘ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೇ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿದ್ದರು. 1970ರಲ್ಲಿ ಬಳ್ಳಾರಿಯ ಸಮಾಜವಾದಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹೂವಿನ ಹಡಗಲಿ ಅಲ್ಲಿ ಸಣ್ಣ ಮನೆಯಲ್ಲಿ ವಾಸವಿದ್ದರು’ ಎಂದು ಅವರನ್ನು ನೆನಪಿಸಿಕೊಂಡರು. ಶಾಸಕ ಶ್ರೀನಿವಾಸಪ್ರಸಾದ್ ಪ್ರಕಾಶ್ ಅವರ ಹೋರಾಟ ಬದುಕಿನ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸದ ಎಚ್.ವಿಶ್ವನಾಥ್, ಶಾಸಕ ಎಚ್.ಎಸ್.ಮಹದೇವಪ್ರಸಾದ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ, ನಿವೃತ್ತ ಪ್ರಾಧ್ಯಾಪಕ ಹಿ.ಶಿ.ರಾಮಚಂದ್ರೇಗೌಡ, ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿನಯ್ಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.