ಕುಣಿಗಲ್: ಎಡೆಯೂರಿನಲ್ಲಿ ಭಕ್ತಿ ಮತ್ತು ಅನ್ನದಾಸೋಹದ ನಿತ್ಯ ಸೇವೆ ನಡೆಯುತ್ತಿದ್ದರೂ ವಚನ ಸಾಹಿತ್ಯದ ಜ್ಞಾನ ಹೆಚ್ಚಿಸಿಕೊಳ್ಳಲು ಗ್ರಂಥಾಲಯ ಬೇಕಾಗಿದೆ ಎಂದು ಗದಗ ಡಂಬಳ ಮಠದ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಸೋಮವಾರ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ಕಕಗಳು ಜಗತ್ತನ್ನೇ ಆಳುತ್ತದೆ ಎಂಬ ನಾಣ್ಣುಡಿ ಇದೆ ಎಂದರು.
ಬೈಬಲ್ ಕ್ರೈಸ್ತ ಜನಾಂಗವನ್ನು ಆಳುತ್ತಿದ್ದರೆ, ಖುರಾನ್ ಮಹಮ್ಮದಿಯರ ಶಿಸ್ತುಬದ್ಧ ಜೀವನಕ್ಕೆ ಹಾದಿ ತೋರಿದೆ. ಬಸವಣ್ಣ, ಸಿದ್ದಲಿಂಗೇಶ್ವರರ ವಚನ ಸಾಹಿತ್ಯದಲ್ಲಿ ವಿಶ್ವದ ಸಮಸ್ಯೆಗೆ ಪರಿಹಾರ ಇದೆ. ಎಲ್ಲಾ ಧರ್ಮ, ಜನಾಂಗದವರಿಗೆ ಅನುಕೂಲವಾಗುವಂತೆ ಗ್ರಂಥಾಲಯ ಆರಂಭಿಸಬೇಕು ಎಂದರು.
ರೈತರು ಭೂಮಿ ಮತ್ತು ಕೈಗಾರಿಕೆ ಮಾಫಿಯಕ್ಕೆ ಬಲಿಯಾಗಿ ಜೀವನ ನಡೆಸುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ರೈತರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮಸ್ಯೆಗಳ ಸುಳಿಯಿಂದ ಹೊರಬರಲು ಮನಸು ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ,ಎಸ್.ಸತ್ಯಮೂರ್ತಿ, ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠಾಧೀಶರಾದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಗದ್ದಿಗೆಮಠದ ಯತೀಶ್ವರ ಶಿವಾಚಾರ್ಯಸ್ವಾಮಿಜಿ, ಕುಂಭಕೋಣಂ ಹಿರೇಮಠದ ರಾಮಾನುಜಂ, ಕಗ್ಗೆರೆ ಮಠದ ಸಿದ್ದಲಿಂಗಸ್ವಾಮಿಜಿ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಜಿ.ಪಂ. ಸದಸ್ಯ ಅರುಣಕುಮಾರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಸದಸ್ಯ ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.