ಸುಳ್ಯ: ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಆಡಳಿತ ಮಂಡಳಿಗೆ ಮಾರ್ಚ್ 11ರಂದು ನಡೆಯುವ ಚುನಾವ ಣೆಗೆ ನಾಮಪತ್ರ ಸಲ್ಲಿಸಲು ಪ್ರಕ್ರಿಯೆ ಬುಧವಾರ ಕೊನೆಗೊಂಡಿದ್ದು, ಒಟ್ಟು 51 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ವರ್ತಕರ ಕ್ಷೇತ್ರ ಮತ್ತು ಸಹಕಾರಿ ಕ್ಷೇತ್ರ ಸೇರಿದಂತೆ ಒಟ್ಟು 13 ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ. ಅಜ್ಜಾವರ ಕ್ಷೇತ್ರದಿಂದ ಒಂಭತ್ತು, ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯದಿಂದ ತಲಾ ಆರು, ಎಡಮಂಗಲ ಕ್ಷೇತ್ರದಿಂದ ನಾಲ್ಕು, ಐವತ್ತೊಕ್ಲು, ಅರಂತೋಡು (ಮಹಿಳೆ) ಹಾಗೂ ಗುತ್ತಿಗಾರಿನಿಂದ ತಲಾ ಮೂರು, ದೇವಚಳ್ಳ, ಅಮರ ಮುಡ್ನೂರು, ಜಾಲ್ಸೂರು (ಪ.ಜಾ) ಹಾಗೂ ಸುಳ್ಯ ಕಸಬಾ (ಪ.ಪಂ) ಕ್ಷೇತ್ರದಿಂದ ತಲಾ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಸಹಕಾರಿ ಕ್ಷೇತ್ರದಿಂದ ಮೂರು ಮತ್ತು ವರ್ತಕರ ಕ್ಷೇತ್ರದಿಂದ ಆರು ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ: ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಅರಂತೋಡಿನಿಂದ ಯಮುನಾ, ಅಜ್ಜಾವರ ದಿಂದ ತೇಜಕುಮಾರ ಬಡ್ಡಡ್ಕ ಮತ್ತು ಸದಾನಂದ ಮಾವಜಿ, ಜಾಲ್ಸೂರಿನಿಂದ ಮೋಹನ ಕುಂಟಿಕಾನ,
ಬೆಳ್ಳಾರೆಯಿಂದ ಶ್ರೀರಾಮ ಪಾಟಾಜೆ ಮತ್ತು ಕೃಷ್ಣಪ್ಪ ಗೌಡ, ಐವತ್ತೊಕ್ಲುವಿನಿಂದ ಬಾಲಕೃಷ್ಣ ಮಣಿಯಾಣಿ ಮತ್ತು ಮಹಾಲಿಂಗ, ಎಡಮಂಗಲದಿಂದ ಜಾಕೆ ಮಾಧವ ಗೌಡ, ಸುಬ್ರಹ್ಮಣ್ಯದಿಂದ ಸತೀಶ್ ಕೂಜುಗೋಡು, ಗುತ್ತಿಗಾರಿನಿಂದ ಪರಶುರಾಮ ಚಿಲ್ತಡ್ಕ, ಮಡಪ್ಪಾಡಿಯಿಂದ ಮಿತ್ರದೇವ ಮಡಪ್ಪಾಡಿ, ಅಮರ ಮುಡ್ನೂರಿನಿಂದ ಯನ್.ಜಯಪ್ರಕಾಶ್ ರೈ, ಸುಳ್ಯ ಕಸಬಾದಿಂದ ಸುಬ್ಬಪ್ಪ ಬಾರಿಕೆ, ವರ್ತಕರ ಕ್ಷೇತ್ರದಿಂದ ಎಸ್.ಸಂಶುದ್ದೀನ್ ಮತ್ತು ಆದಂ ಕಮ್ಮಾಡಿ ಹಾಗೂ ಸಹಕಾರಿ ಕ್ಷೇತ್ರದಿಂದ ಕಳಂಜ ವಿಶ್ವನಾಥ ರೈ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಬೆಂಬಲಿತರಾಗಿ ಬೆಳ್ಳಾರೆ ಕ್ಷೇತ್ರದಿಂದ ಮೋನಪ್ಪ ತಂಬಿನ ಮಕ್ಕಿ, ನವೀನಕುಮಾರ ರೈ, ಗಂಗಾಧರ ರೈ ಪುಡ್ಕಜೆ, ಅಮರ ಮುಡ್ನೂರಿನಿಂದ ರಾಧಾಕೃಷ್ಣ ಬೊಳ್ಳೂರು, ಎಡಮಂಗಲದಿಂದ ಲಕ್ಷ್ಮೀ ನಾರಾಯಣ ನಡ್ಕ, ಐವತ್ತೊಕ್ಲುವಿನಿಂದ ಲಿಗೋಧರ ಆಚಾರ್ಯ, ಸುಬ್ರಹ್ಮಣ್ಯದಿಂದ ಮೋಹನ ಕೋಟಿ ಗೌಡನಮನೆ, ಕೆ.ಸಿ.ಹಿಮ್ಮತ್, ದೇವಚಳ್ಳದಿಂದ ಜಯರಾಮ ಹಾಡಿಕಲ್ಲು, ಅರಂತೋಡಿನಿಂದ ವಾರಿಜಾ ಕುರುಂಜಿ ಮತ್ತು ಅನಿತಾ, ಅಜ್ಜಾವರದಿಂದ ಕೃಪಾಶಂಕರ ತುದಿಯಡ್ಕ ಮತ್ತು ಎ.ಎಸ್.ಮನ್ಮಥ, ವರ್ತಕರ ಕ್ಷೇತ್ರದಿಂದ ಸುಧಾಕರ ಕಾಮತ್, ಸಹಕಾರಿ ಕ್ಷೇತ್ರದಿಂದ ಹರೀಶ್ ಕಂಜಿಪಿಲಿ, ಗುತ್ತಿಗಾರಿನಿಂದ ಬಿ.ಕೆ.ಬೆಳ್ಯಪ್ಪ, ಜಾಲ್ಸೂರಿ ನಿಂದ ಶಂಕರ್ ಪೆರಾಜೆ, ಸುಳ್ಯ ಕಸಬಾದಿಂದ ಸೀತಾನಂದ ಬೇರ್ಪಡ್ಕ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಗೆ ಬಂಡಾಯದ ಬಿಸಿ: ಸುಳ್ಯ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಆಲೆಟ್ಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಸುಳ್ಯ ಸಿ.ಎ.ಬ್ಯಾಂಕ್ ನಿರ್ದೇಶಕ ಸದಾನಂದ ನಾಯಕ್ ಅಜ್ಜಾವರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಶೈಲೇಶ್ ಅಂಬೆಕಲ್ಲು ಸಹಕಾರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಎಪಿಎಂಸಿ ಯ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಎನ್.ಜಯಪ್ರಕಾಶ್ ರೈ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲದಿಂದ ಅಮರಮೂಡ್ನೂರು ಕ್ಷೇತ್ರ ದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಸಹಕಾರಿ ಸಂಘಗಳ ಕ್ಷೇತ್ರಕ್ಕೆ ಅವಿರೋಧ ಆಯ್ಕೆ
52 ಅಭ್ಯರ್ಥಿಗಳಿಂದ 54 ನಾಮಪತ್ರ
ಪುತ್ತೂರು: ಪುತ್ತೂರು ತಾಲ್ಲೂಕು ಎಪಿಎಂಸಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಒಟ್ಟು 13 ಸ್ಥಾನಗಳ ಪೈಕಿ ಸಹಕಾರಿ ಸಂಘಗಳ ಕ್ಷೇತ್ರಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 12 ಸ್ಥಾನಗಳಿಗೆ ಒಟ್ಟು 52 ಅಭ್ಯರ್ಥಿಗಳು 54 ನಾಮಪತ್ರ ಸಲ್ಲಿಸಿದ್ದಾರೆ.
ಸಹಕಾರಿ ಸಂಘಗಳ ಕ್ಷೇತ್ರದಿಂದ ಬಿಜೆಪಿಯ ರಾಧಾಕೃಷ್ಣ ರೈ ಸಾಜ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಕ್ಷೇತ್ರಕ್ಕೆ ಅವರೊಬ್ಬರಷ್ಟೇ ನಾಮಪತ್ರ ಸಲ್ಲಿಸಿದ್ದರು.
ವರ್ತಕ ಕ್ಷೇತ್ರಕ್ಕೆ 5 , ಅನುಸೂಚಿತ ಜಾತಿಗೆ ಮೀಸಲಾದ ಸವಣೂರು ಕ್ಷೇತ್ರಕ್ಕೆ 2 , ಅನುಸೂಚಿತ ಪಂಗಡಕ್ಕೆ ಮೀಸಲಾದ ಕೋಡಿಂಬಾಡಿ ಕ್ಷೇತ್ರಕ್ಕೆ 2 , ಸಾಮಾನ್ಯ ವರ್ಗಕ್ಕೆ ವರ್ಗಕ್ಕೆ ಮೀಸಲಾದ ಉಪ್ಪಿನಂಗಡಿ ಕ್ಷೇತ್ರಕ್ಕೆ 7 . ನೆಲ್ಯಾಡಿ ಕ್ಷೇತ್ರಕ್ಕೆ 3, ಕಡಬ ಕ್ಷೇತ್ರಕ್ಕೆ 6 , ನರಿಮೊಗ್ರು ಕ್ಷೇತ್ರಕ್ಕೆ 7 , ಕುಂಬ್ರ ಕ್ಷೇತ್ರಕ್ಕೆ 7 , ಆಲಂಕಾರು ಕ್ಷೇತ್ರಕ್ಕೆ 4, ಮಹಿಳೆಯರಿಗೆ ಮೀಸಲಾದ ಪುತ್ತೂರು ಕ್ಷೇತ್ರಕ್ಕೆ 3, ಹಿಂದುಳಿದ ವರ್ಗ `ಬಿ~ಗೆ ಮೀಸಲಾದ ಮರ್ದಾಳ ಕ್ಷೇತ್ರಕ್ಕೆ 5. ಹಿಂದುಳಿದ ವರ್ಗ ~ಎ~ಗೆ ಮೀಸಲಾದ ನೆಟ್ಟಣಿಗೆ ಮುಡ್ನೂರು ಕ್ಷೇತ್ರಕ್ಕೆ 2 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರಗಳ ಪರಿಶೀಲನೆ ಗುರುವಾರ ನಡೆಯಲಿದ್ದು, ನಾಮಪತ್ರಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಇದೇ 25 ಕೊನೆಯ ದಿನವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.