ಮುಂಬೈ /ನವದೆಹಲಿ (ಪಿಟಿಐ): ಏರ್ ಇಂಡಿಯಾ ಪೈಲಟ್ಗಳು ನಡೆಸುತ್ತಿರುವ ಮುಷ್ಕರವು ಬುಧವಾರ ಎರಡನೇಯ ದಿನಕ್ಕೆ ಕಾಲಿಟ್ಟ ಪರಿಣಾಮ ಮುಂಬೈ ಹಾಗೂ ದೆಹಲಿಯಿಂದ ಪ್ರಯಾಣಿಸಬೇಕಾಗಿದ್ದ ನಾಲ್ಕು ವಿಮಾನಗಳ ಹಾರಾಟ ರದ್ದಾಗಿದ್ದು, ಈ ಮಧ್ಯೆ ಪೈಲಟ್ಗಳ ವಿರುದ್ಧ ಆಡಳಿತ ಮಂಡಳಿಯು ಕೋರ್ಟ್ನ ಮೊರೆ ಹೋಗುವ ಚಿಂತನೆ ನಡೆಸಿದೆ.
ಬುಧವಾರ ದೆಹಲಿ ಹಾಗೂ ಮುಂಬೈಯಿಂದ ಸಂಚರಿಸಬೇಕಾಗಿದ್ದ ನಾಲ್ಕು ವಿಮಾನಗಳ ಹಾರಾಟವು ಮುಷ್ಕರದಿಂದಾಗಿ ರದ್ದುಗೊಂಡಿವೆ ಎಂದು ಏರ್ ಇಂಡಿಯಾ ಮಾಧ್ಯಮ ವಕ್ತಾರರು ತಿಳಿಸಿದರು.
ಇತರೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರ ಸುಗಮವಾಗಿದ್ದು, ಲಭ್ಯವಿರುವ ಪೈಲಟ್ಗಳ ಸಹಾಯದಿಂದ ಸಂಭವನೀಯ ಸಂಚಾರ ಮಾರ್ಗಗಳಲ್ಲಿ ಹಾರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ಬೋಯಿಂಗ್ 787 ವಿಮಾನ ತರಬೇತಿಯ ವೇಳಾಪಟ್ಟಿಯ ಬದಲಾವಣೆ ವಿರೋಧಿಸಿ `ಇಂಡಿಯನ್ ಪೈಲಟ್ಸ್ ಗಿಲ್ಡ್~ಗೆ (ಐಪಿಜಿ) ನಿಷ್ಠರಾದ ಸುಮಾರು 200 ಪೈಲಟ್ಗಳು ಮುಷ್ಕರದಲ್ಲಿ ತೊಡಗಿರುವ ಪರಿಣಾಮ ಮಂಗಳವಾರ ಹಾರಾಟ ನಡೆಸಬೇಕಾಗಿದ್ದ 13 ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ರದ್ದುಗೊಂಡಿತು.
ಈ ಹಿನ್ನೆಲೆಯಲ್ಲಿ ಮುಷ್ಕರ ನಿರತ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಏರ್ ಇಂಡಿಯಾ, ಮಂಗಳವಾರ 10 ಪೈಲಟ್ಗಳನ್ನು ಸೇವೆಯಿಂದ ವಜಾ ಮಾಡಿತ್ತು. ಜತೆಗೆ `ಇಂಡಿಯನ್ ಪೈಲಟ್ಸ್ ಗಿಲ್ಡ್` (ಐಪಿಜಿ) ಮಾನ್ಯತೆ ರದ್ದು ಮಾಡಿ, ಮುಂಬೈ ಹಾಗೂ ದೆಹಲಿಯಲ್ಲಿರುವ ಅದರ ಕಚೇರಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.