ಮದ್ದೂರು/ಹುಣಸೂರು: ಸೋಮವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.
ಮದ್ದೂರು ತಾಲ್ಲೂಕು ಕೊಪ್ಪ ಹೋಬಳಿ ಟಿ.ಬೆಳ್ಳೆಕೆರೆ ಗ್ರಾಮದ ತಗ್ಗಹಳ್ಳಿ ಕ್ರಾಸ್ ಬಳಿ ಬೈಕ್ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಮೃತಪಟ್ಟರು.
ತಾಲ್ಲೂಕಿನ ಗುಡಿದೊಡ್ಡಿ ಗ್ರಾಮದ ಪುಟ್ಟರಾಜು ಅವರ ಪುತ್ರ ಪ್ರದೀಪ್ (18), ಚಿಕ್ಕಣ್ಣ ಅವರ ಪುತ್ರ ವಿಜೇಂದ್ರ (19), ವೆಂಕಟೇಶ್ ಅವರ ಪುತ್ರ ಅಭಿಷೇಕ್ (21) ಮೃತಪಟ್ಟವರು.
ಮಂಗಳವಾರದಿಂದ ಆರಂಭಗೊಳ್ಳುವ ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರಸ್ವಾಮಿ ದನಗಳ ಜಾತ್ರೆಯಲ್ಲಿ ದನಗಳನ್ನು ಕಟ್ಟಲು ಸ್ಥಳವನ್ನು ಗುರುತಿಸಲು ಈ ಮೂವರು ಬೈಕ್ನಲ್ಲಿ ಅಲ್ಲಿಗೆ ತೆರಳುತ್ತಿದ್ದರು. ಲಾರಿಯೊಂದರ ಹಿಂಭಾಗದಲ್ಲಿ ಬರುತ್ತಿದ್ದಾಗ ಟಿ.ಬೆಳ್ಳೆಕೆರೆ ಗ್ರಾಮದ ಬಳಿ ತಗ್ಗಹಳ್ಳಿ ಕ್ರಾಸ್ನಲ್ಲಿ ತಿರುವು ತೆಗೆದುಕೊಂಡಾಗ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತು.
ಹುಣಸೂರು ವರದಿ: ತಾಲ್ಲೂಕಿನ ಗಾವಡಗೆರೆ ಬಳಿ ಎರಡು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮೃತಪಟ್ಟು, ಒಬ್ಬ ಗಾಯಗೊಂಡಿದ್ದಾನೆ.
ಕೆ.ಆರ್.ನಗರದ ಚೇತನ್ (25), ಸೋಮಶೇಖರ್ (23), ಕಟ್ಟೆಮಳವಾಡಿಯ ಸಿದ್ದರಾಜು (48) ಮೃತಪಟ್ಟವರು. ಚೇತನ್ ಸ್ಥಳದಲ್ಲೇ ಮೃತಪಟ್ಟರೆ, ಉಳಿದಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ತೀವ್ರ ಗಾಯಗೊಂಡ ತಿಮ್ಮಪ್ಪ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೇತನ್ ಹಾಗೂ ಸೋಮಶೇಖರ್ ಒಂದೇ ದ್ವಿಚಕ್ರ ವಾಹನದಲ್ಲಿ ಕೆ.ಆರ್.ನಗರದಿಂದ ಹುಣಸೂರು ತಾಲ್ಲೂಕಿನ ಮಾರಗೌಡನಹಳ್ಳಿಗೆ ಸಂಬಂಧಿಕರ ತಿಥಿ ಕಾರ್ಯಕ್ಕಾಗಿ ಬರುತ್ತಿದ್ದರು. ಇದೇ ವೇಳೆ ಸಿದ್ದರಾಜು ಹಾಗೂ ತಿಮ್ಮಪ್ಪ ಕೂಡ ದ್ವಿಚಕ್ರ ವಾಹನದಲ್ಲಿ ಕಟ್ಟೆಮಳಲವಾಡಿಯಿಂದ ಕೆ.ಆರ್.ನಗರಕ್ಕೆ ತೆರಳುತ್ತಿದ್ದರು.