ಬಸವಕಲ್ಯಾಣ: ಎರೆಹುಳು ಗೊಬ್ಬರ ಉಪಯೋಗಿಸುವುದರಿಂದ ಬೆಳೆಗಳು ಸರಿಯಾಗಿ ಬೆಳೆದು ಉತ್ಪನ್ನ ಹೆಚ್ಚುತ್ತದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ಹೇಳಿದರು.
ತಾಲ್ಲೂಕಿನ ಯಲ್ಲದಗುಂಡಿ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಶಾಂತೇಶ್ವರಿ ಸ್ವಯಂಸೇವಾ ಸಂಸ್ಥೆಯಿಂದ ಈಚೆಗೆ ಹಮ್ಮಿಕೊಂಡ ಎರೆಹುಳು ಗೊಬ್ಬರ ಉತ್ಪಾದನಾ ಆರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾವಯವ ಕೃಷಿಗೆ ಎರೆಹುಳು ಗೊಬ್ಬರ ಅವಶ್ಯಕವಾಗಿದೆ ಆದ್ದರಿಂದ ಎಲ್ಲರ ಹೊಲಗಳಲ್ಲಿ ಈ ಗೊಬ್ಬರದ ಘಟಕಗಳು ಸ್ಥಾಪಿಸಬೇಕು ಎಂದರು.
ಭಾರತೀಯ ಆಹಾರ ನಿಗಮದ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ ರೈತರು ಸ್ವಾವಲಂಬನೆ ಸಾಧಿಸಲು ಗೊಬ್ಬರ ಮತ್ತು ಅವಶ್ಯಕವಾದ ಬೀಜ ಇತ್ಯಾದಿಗಳನ್ನು ತಾವೇ ಸಿದ್ಧಪಡಿಸಬೇಕು ಎಂದು ಕೇಳಿಕೊಂಡರು.
ಅಬ್ದುಲ್ ಲತೀಫ್ ರೇಷ್ಮೆ ಕೃಷಿಯ ಲಾಭದ ಬಗ್ಗೆ ಹೇಳಿದರು. ಶಿವಕುಮಾರ ಮಠಪತಿ ಮಾತನಾಡಿದರು. ಶಿವರುದ್ರಪ್ಪ ತಾಟೆ, ಗೋಪಾಲರಾವ ಪಾಟೀಲ, ಬಸವರಾಜಪ್ಪ ಪಾಲ್ಗೊಂಡಿದ್ದರು. ಕೃಷಿ ಅಧಿಕಾರಿ ಕರಬಸಪ್ಪ ನಿರೂಪಿಸಿದರು. ಬಂಡೆಪ್ಪ ಮಾಳಿ ವಂದಿಸಿದರು.