ಶಿವಮೊಗ್ಗ: ಕೆಜೆಪಿ ಪ್ರಣಾಳಿಕೆಯಲ್ಲಿ ಸರ್ವಜನರ ಹಿತ ಕಾಯುವ ಯೋಜನೆಗಳಿದ್ದು, ಏ. 10ರ ಒಳಗೆ ಬಿಡುಗಡೆ ಮಾಡಲಾಗುವುದು ಎಂದು ಕೆಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಎನ್ಇಎಸ್ ಮೈದಾನದಲ್ಲಿ ಕೆಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷ ಅಧಿಕಾರಕ್ಕೆ ಬಂದರೆ ಯಾರೂ ಆದಾಯ ಪ್ರಮಾಣ ಪತ್ರ ಸಲ್ಲಿಸುವ ಹಾಗಿಲ್ಲ. ್ಙ 1 ಸಾವಿರ ಕೋಟಿ ಬಂಡವಾಳದಲ್ಲಿ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಿಸಲಾಗುವುದು. ಹಾಗೆಯೇ, ಭಾಗ್ಯಲಕ್ಷ್ಮೀ ಯೋಜನೆಯನ್ನು ಎಲ್ಲ ವರ್ಗಕ್ಕೂ ವಿಸ್ತರಿಸಲಾಗುವುದು. ಇವು ಕೆಜೆಪಿ ಪ್ರಣಾಳಿಕೆಯ ಪ್ರಮುಖಾಂಶ ಎಂದರು.
ಕಾಂತೇಶ್ ದುಬೈ ಪ್ರವಾಸ ನಿಗೂಢ: ಇದಕ್ಕೂ ಮುನ್ನ ಮಾತನಾಡಿದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎಸ್. ಗುರುಮೂರ್ತಿ, ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಮಗ ಕೆ.ಇ. ಕಾಂತೇಶ್ 10 ಬಾರಿ ದುಬೈಗೆ ಭೇಟಿ ನೀಡಿದ ಬಗ್ಗೆ ತಮ್ಮ ಬಳಿ ದಾಖಲೆಗಳಿವೆ. ಅಲ್ಲಿ ಪದೇ ಪದೇ ಭೇಟಿ ನೀಡಿದ ಉದ್ದೇಶವೇನು? ಎಂದು ಅವರು ಪ್ರಶ್ನಿಸಿದರು.
ಕಾಂತೇಶ್ ರಾಜಸ್ಥಾನದಲ್ಲಿ ಗ್ರಾನೈಟ್ ಉದ್ದಿಮೆ ನಡೆಸುತ್ತಿರುವ ಕುರಿತಂತೆ ಮಾಹಿತಿಗಳು ಬಹಿರಂಗವಾದಾಗ ಇದೇ ಈಶ್ವರಪ್ಪ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ತಮ್ಮ ಪುತ್ರ ಉದ್ದಿಮೆಯಾಗಿದ್ದು ಗ್ರಾನೈಟ್ ವ್ಯವಹಾರ ನಡೆಸುತ್ತಿರುವುದು ನಿಜ ಎಂದು ತಿಳಿಸಿದ್ದರು ಎಂದರು.
ಯಡಿಯೂರಪ್ಪ ಕುರಿತಂತೆ ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡುವ ಈಶ್ವರಪ್ಪ ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕಿದೆ ಎಂದು ಆರೋಪಿಸಿದರು.