ರಾಜರಾಜೇಶ್ವರಿ ನಗರ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ಸಿಗುವಂತಹ ಕೆಲಸವನ್ನು ಸರ್ಕಾರ ಹಾಗೂ ಸಂಘ- ಸಂಸ್ಥೆಗಳು ಸೇರಿ ಮಾಡಬೇಕು ಎಂದು ಬಿಬಿಎಂಪಿ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಚ್. ರಾಮಚಂದ್ರ ಸಲಹೆ ನೀಡಿದರು.
ಕೆರೆಪಾಳ್ಯ ಮತ್ತು ಕೃಷ್ಣಪ್ಪ ಬಡಾವಣೆ ಕ್ಷೇಮಾಭಿವೃದ್ಧಿ ಸಂಘವು ಮಣಿಪಾಲ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
`ಕೇವಲ ಹೆಸರು ಮತ್ತು ಪ್ರಚಾರಕ್ಕೆ ಮಾತ್ರವಲ್ಲದೆ ಹಿಂದುಳಿದ ಜನರ ಆರೋಗ್ಯದ ದೃಷ್ಟಿಯಿಂದ ನುರಿತ ವೈದ್ಯರು ಹಾಗೂ ಉಳ್ಳವರ ಸಹಾಯ ಪಡೆದು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಬೇಕು~ ಎಂದು ಅವರು ಸಲಹೆ ನೀಡಿದರು.
ಸ್ಥಳೀಯ ಮುಖಂಡರಾದ ಪ್ರಕಾಶ್, ಸದಾಶಿವ ಇತರರು ಹಾಜರಿದ್ದರು. ಶಿಬಿರದಲ್ಲಿ 500 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
ಸೇರ್ಪಡೆ: ಗೋಣಿಪುರ, ಹಂಪಾಪುರ, ಕೆ.ಗೊಲ್ಲಹಳ್ಳಿ, ಕುಂಬಳಗೋಡು, ತಿಪ್ಪೂರು, ಸೀಗೆಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ಹಲವು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ವಕ್ತಾರ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬಿಬಿಎಂಪಿ ಸದಸ್ಯ ಡಿ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ವಿ.ಕೃಷ್ಣಪ್ಪ ಇತರರಿದ್ದರು.