ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಒಲಿಯದ ಕಲೆ- ಸದಾನಂದಗೌಡ

Last Updated 20 ಜನವರಿ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು: `ನನಗೂ ಕವಿತೆ ರಚಿಸುವ ಕಲೆಯನ್ನು ಕಲಿಸಿಕೊಡಿ ಸ್ವಾಮಿ, ಅಗತ್ಯ ಬಿದ್ದಾಗ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಲಾಪಗಳಲ್ಲಿ ನನ್ನ ಅಭಿಪ್ರಾಯವನ್ನು ಕವಿತೆಯ ಮೂಲಕ ಚುಟುಕಾಗಿ ಮಂಡಿಸುತ್ತೇನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಾಹಿತಿ ದೊಡ್ಡರಂಗೇಗೌಡ ಅವರಲ್ಲಿ ಮನವಿ ಮಾಡುವ ಮೂಲಕ ಹಾಸ್ಯ ಚಟಾಕಿಯನ್ನು ಹಾರಿಸಿದರು.

ನಗರದ ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ದೊಡ್ಡರಂಗೇಗೌಡ ಅವರ ಒಂಬತ್ತು ಪುಸ್ತಕ ಹಾಗೂ ಸಿ.ಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, `ವಿಧಾನಪರಿಷತ್ತಿನಲ್ಲಿ ದೊಡ್ಡರಂಗೇಗೌಡರು ವಿರೋಧಪಕ್ಷ ಮತ್ತು ಸ್ವಪಕ್ಷಗಳಿಗೆ ಉಂಟಾಗುವ ಮುಜುಗರ ಸಂದರ್ಭವನ್ನು ಬದಿಗಿರಿಸಿ ತಮ್ಮ ಅಭಿಪ್ರಾಯವನ್ನು ಕವಿತೆಯ ಮೂಲಕ ಸ್ಪಷ್ಟವಾಗಿ ಮಂಡಿಸುವ ಚಾಕಚಕ್ಯತೆಯನ್ನು ಪಡೆದಿದ್ದಾರೆ. ಈ ಕಲೆಯು ಎಲ್ಲರಿಗೂ ಒಲಿಯುವಂತದ್ದಲ್ಲ~ ಎಂದು ಹೇಳಿದರು.

`ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಹಾಳಾಗುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯಕ್ಷೇತ್ರವು ಮಾನವ ಸಂಬಂಧಗಳಿಗೆ ಹೆಚ್ಚು ಒತ್ತು ನೀಡಬೇಕಿದೆ. ಈ ಕಾರ್ಯವನ್ನು ದೊಡ್ಡರಂಗೇಗೌಡರು  80ಕ್ಕಿಂತ ಹೆಚ್ಚು ಪುಸ್ತಕಗಳನ್ನು ವೈಚಾರಿಕ ನೆಲೆಯಲ್ಲಿ ರಚಿಸಿರುವ ಮೂಲಕ ಸಾಧಿಸಿದ್ದಾರೆ. ಇಂತಹ ಸಾಧಕರನ್ನು ಸನ್ಮಾನಿಸಲು ಹರ್ಷಿಸುತ್ತೇನೆ~ ಎಂದರು.

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, `ಬದುಕು ಮತ್ತು ಬರಹಗಳ ನಡುವೆ ಹೆಚ್ಚು ಅಂತರವಿಲ್ಲದೇ ಬದುಕಿದವರು ದೊಡ್ಡರಂಗೇಗೌಡರು. ಹಳೆಯ ತಲೆಮಾರಿನ ಕಾವ್ಯ ಮಾರ್ಗವನ್ನು ಅನುಸಂಧಾನ ಮಾಡಿಕೊಂಡಿದ್ದರೂ ಸಹ ಸ್ವಂತ ಕಾವ್ಯಪ್ರಕಾರವನ್ನು ಸೃಷ್ಟಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದಾರೆ~ ಎಂದರು.

ಇದೇ ಸಂದರ್ಭದಲ್ಲಿ ದೊಡ್ಡರಂಗೇಗೌಡ ದಂಪತಿಯನ್ನು ಸನ್ಮಾನಿಸಲಾಯಿತು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಎಂ.ವಿ.ರಾಜಶೇಖರನ್, ಎನ್.ತಿಪ್ಪಣ್ಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ, ಗೀತರಚನಕಾರ ವಿ.ಮನೋಹರ್, ಕಾದಂಬರಿಗಾರ್ತಿ ಪ್ರೇಮಾ ಭಟ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT