ಗುಲ್ಬರ್ಗ: ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) 2012ರ ಜನವರಿಯಲ್ಲಿ ಉದ್ಯಮ ದಾಖಲೆಗಳ ನಿರ್ವಹಣಾ ವ್ಯವಸ್ಥೆ (ಇಡಿಎಂಎಸ್) ಜಾರಿಗೆ ತರಲಿದೆ.
ಈ ಸೌಲಭ್ಯ ಜಾರಿಗೆ ಬರುವುದರಿಂದ ಗ್ರಾಹಕರು ನಿಗಮದ ಯಾವುದೇ ಕಚೇರಿಯಲ್ಲಿ ತಮ್ಮ ಪಾಲಿಸಿ, ವಿಮೆ, ದಾವೆ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ, ಹಣ ಪಾವತಿ ಹಾಗೂ ಬೋನಸ್ ಮತ್ತು ಸಾಲಗಳನ್ನು ಪಡೆಯಬಹುದು ಎಂದು ನಿಗಮದ ದಕ್ಷಿಣ ಕೇಂದ್ರ ಪ್ರಾದೇಶಿಕ ಪ್ರಬಂಧಕ (ಗ್ರಾಹಕ ಸಂಬಂಧ ನಿರ್ವಹಣೆ) ಎಸ್. ರಾಜಶೇಖರ್ ಹೇಳಿದರು.
ರಾಜ್ಯದ ಆರನೇ `ಎಲ್ಐಸಿ ಗ್ರಾಹಕ ವಲಯ ಕಚೇರಿ~ಯನ್ನು ಗುಲ್ಬರ್ಗದಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರ ನೆರವು ಹಾಗೂ ಮಾಹಿತಿಗಾಗಿ ಏಳನೇ ಕಚೇರಿಯನ್ನು ಶೀಘ್ರವೇ ಬೆಳಗಾವಿಯಲ್ಲಿ ಆರಂಭಿಸಲಾಗುವುದು. ಗ್ರಾಹಕರಿಗೆ ನೇರ, ದೂರವಾಣಿ ಹಾಗೂ ಇ-ಮೇಲ್ ಮೂಲಕ ಮಾಹಿತಿ ಮತ್ತು ಸಮಸ್ಯೆ ಪರಿಹರಿಸಲಾಗುವುದು. ನಿಗಮದ 53 ಸೇವೆಗಳ ಬಗ್ಗೆ ಎಲ್ಲ ಗ್ರಾಹಕರು ಸೇವೆ ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ವ್ಯಾಪ್ತಿ: ಭಾರತ, ಚೀನಾ ಮತ್ತು ಅಮೆರಿಕಾ ಬಿಟ್ಟು ವಿಶ್ವದ ಯಾವುದೇ ದೇಶದ ಜನಸಂಖ್ಯೆಗಿಂತ ಹೆಚ್ಚಿನ ಗ್ರಾಹಕರನ್ನು (38 ಕೋಟಿ) ಎಲ್ಐಸಿ ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ಶೇ 78ರಷ್ಟು ಪಾಲಿಸಿ ಹಾಗೂ ಶೇ 74 ಪ್ರೀಮಿಯಂ ಪಾಲು ಪಡೆದಿದೆ ಎಂದರು.
2010-11 ಆರ್ಥಿಕ ವರ್ಷದಲ್ಲಿ 183 ಲಕ್ಷಕ್ಕೂ ಹೆಚ್ಚು ದಾವೆ ಇತ್ಯರ್ಥ ಪಡಿಸಿ, ್ಙ 52,160 ಕೋಟಿ ಪಾವತಿಸಿದೆ. ವಾರ್ಷಿಕ ಆದಾಯವು ್ಙ 2,99,272 ಕೋಟಿ ಆಗಿದೆ ಎಂದರು.
ಪ್ರಾದೇಶಿಕ ಉಪ ಮುಖ್ಯ ಎಂಜಿನಿಯರ್ ಪಿ.ಕೆ. ಮಿಶ್ರಾ, ಹಿರಿಯ ವಿಭಾಗೀಯ ಪ್ರಬಂಧಕ ಜಿ. ರಘುಪತಿ, ಪ್ರಬಂಧಕರಾದ ಕೆ. ಅನಂತ ಪದ್ಮನಾಭ, ಸತ್ಯನಾರಾಯಣ ಮತ್ತು ಸಿ. ಮಂಜುನಾಥ ಇದ್ದರು.