ಚಿತ್ರದುರ್ಗ: ತಾಲ್ಲೂಕಿನ ಸೀಬಾರ ಬಳಿ ಇರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರ ಸ್ಮಾರಕವನ್ನು ಲೋಕಾರ್ಪಣೆ ಮಾಡಲು ಶನಿವಾರ ನಗರಕ್ಕೆ ಆಗಮಿಸಿದ್ದ ದಲೈಲಾಮಾ ಹರ್ಷ, ಉಲ್ಲಾಸದಿಂದ ಪುಳಕಿತರಾಗಿದ್ದರು.
ಸ್ಮಾರಕ ಲೋಕಾರ್ಪಣೆ ನಂತರ ಮಾತನಾಡಿದ ಅವರು, ನಿಜಲಿಂಗಪ್ಪ ದೂರದೃಷ್ಟಿ ಹೊಂದಿದ್ದರು. ಅವರ ಸ್ಮಾರಕದ ಆವರಣ ಜ್ಞಾನ ಕೇಂದ್ರವಾಗಬೇಕು.
ಈ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಬದಲಾವಣೆ ಒತ್ತಡದಿಂದ ಸಾಧ್ಯವಿಲ್ಲ. ಮನಪರಿವರ್ತನೆ ಮುಖ್ಯ. ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿ ಸೇರಿ ಚಿಂತನೆ ನಡೆಸಬೇಕು. ನಿಜಲಿಂಗಪ್ಪ ಅವರಂತಹ ಮಹಾನ್ ವ್ಯಕ್ತಿ ಸಲ್ಲಿಸಿದ ಸೇವೆ ಕುರಿತು ಜನರಿಗೆ ತಿಳಿಸಬೇಕು ಎಂದರು.
ಇಂದಿನ ಯುವಪೀಳಿಗೆ ಸಾವಿರಾರು ವರ್ಷಗಳ ಸಂಪ್ರದಾಯ ಮೌಲ್ಯಗಳನ್ನು ನಿರ್ಲಕ್ಷಿಸುತ್ತಿರುವುದು ದುರದೃಷ್ಟಕರ. ಮೌಲ್ಯಗಳನ್ನು ಎತ್ತಿ ಹಿಡಿದು ಪ್ರಾಮಾಣಿಕ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾಡಳಿತ, ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಚಿತ್ರದುರ್ಗ, ಎಸ್. ನಿಜಲಿಂಗಪ್ಪ ನ್ಯಾಷನಲ್ ಫೌಂಡೇಷನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಲೋಕಾರ್ಪಣೆ ಸಮಾರಂಭ ಆಯೋಜಿಸಲಾಗಿತ್ತು.
ದಲೈಲಾಮಾ ಮೊದಲು ನಿಜಲಿಂಗಪ್ಪ ಅವರ ಸ್ಮಾರಕಕ್ಕೆ ಪುಷ್ಪ ಅರ್ಪಿಸಿದರು. ನಂತರ ಗಣ್ಯರ ಜತೆ ವೇದಿಕೆಗೆ ಬಂದ ಅವರು ತಕ್ಷಣ ತಮ್ಮ ಪೀಠದಲ್ಲಿ ಆಸೀನರಾಗದೇ ವೇದಿಕೆ ಹಿಂಭಾಗದ ಬ್ಯಾನರ್ನಲ್ಲಿದ್ದ ಎಸ್. ನಿಜಲಿಂಗಪ್ಪ ಅವರ ಭಾವಚಿತ್ರ ನೋಡಲು ತೆರಳಿದರು. ಕ್ಷಣಕಾಲ ಅಲ್ಲಿ ನಿಂತು ಭಾವಚಿತ್ರವನ್ನು ತದೇಕಚಿತ್ತದಿಂದ ನೋಡಿದ ನಂತರ ತಮ್ಮ ಆಸನದಲ್ಲಿ ಕುಳಿತರು. ನಗರಕ್ಕೆ ಇದು ದಲೈಲಾಮಾ ಅವರ ಎರಡನೇ ಭೇಟಿ. ಈ ಹಿಂದೆ 2002ರಲ್ಲಿ ಮುರುಘಾ ಮಠದ ‘ಬಸವಶ್ರೀ’ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದರು.