ಬೆಂಗಳೂರು: ಏಕಲವ್ಯ ಪ್ರಶಸ್ತಿಗಾಗಿ ರೋಷನ್ ಫರಾರೋ (ಬಾಡಿ ಬಿಲ್ಡಿಂಗ್), ಎಸ್.ನವೀನ್ (ಕರಾಟೆ) ಹಾಗೂ ಪಿ.ಸೋಮಶೇಖರ್ (ಅಂಗವಿಕಲ ಕ್ರೀಡಾಪಟು) ನೀಡಿದ್ದ ದಾಖಲೆಗಳನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮಂಗಳವಾರ ಪರಿಶೀಲನೆ ನಡೆಸಲಿದೆ.
ಇಲಾಖೆಯು ಮೊದಲು ಪ್ರಕಟಿಸಿದ ಪ್ರಶಸ್ತಿ ಪಟ್ಟಿಯಲ್ಲಿದ್ದ ಈ ಮೂರು ಮಂದಿ ಕ್ರೀಡಾಪಟುಗಳು ಸಲ್ಲಿಸಿರುವ ದಾಖಲೆಗಳು ಅನುಮಾನಕ್ಕೆ ಕಾರಣವಾಗಿದ್ದರಿಂದ ತಡೆಹಿಡಿಯಲಾಗಿತ್ತು. ಹಾಗಾಗಿ ಆಗಸ್ಟ್ 29ರಂದ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ 12 ಮಂದಿಗೆ ಮಾತ್ರ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
`ಮಂಗಳವಾರ ನಾವು ಈ ಕ್ರೀಡಾಪಟುಗಳ ದಾಖಲೆಗಳನ್ನು ಪರಿಶೀಲಿಸಲಿದ್ದೇವೆ. ಈ ಮೂರು ಮಂದಿ ಕ್ರೀಡಾಪಟುಗಳಿಗೆ ಹಾಜರಾಗಲು ನಾವು ಸೂಚಿಸಿದ್ದೇವೆ. ದಾಖಲೆ ಪರಿಶೀಲಿಸಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್ ಅವರಿಗೆ ವರದಿ ನೀಡಲಿದ್ದೇವೆ~ ಎಂದು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ವೈ.ಆರ್.ಕಾಂತರಾಜ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
`ಆಕಸ್ಮಾತ್ ರೋಷನ್, ನವೀನ್ ಹಾಗೂ ಸೋಮಶೇಖರ್ ಅವರು ಪ್ರಶಸ್ತಿ ಪಡೆಯಲು ನೀಡಿರುವ ದಾಖಲೆಗಳಲ್ಲಿ ದೋಷ ಇರುವುದು ಧೃಡಪಟ್ಟರೆ ಅವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲಾಗುವುದು~ ಎಂದು ಪೆರುಮಾಳ್ ಎಚ್ಚರಿಕೆ ಕೂಡ ನೀಡಿದ್ದಾರೆ.