ಶಿವಮೊಗ್ಗ: ಶ್ರೀಸಾಯಿ ಕಲಾ ಪ್ರತಿಷ್ಠಾನ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸಹಯೋಗದಲ್ಲಿ ಫೆ. 20ರಂದು ನಗರದ ಕುವೆಂಪು ರಂಗಮಂದಿರದಲ್ಲಿ ರಾಜ್ಯಮಟ್ಟದ ಮಹಿಳಾ ಯಕ್ಷಗಾನ ಕಾರ್ಯಾಗಾರ ಹಮ್ಮಿಕೊಂಡಿದೆ.ಪ್ರಾತ್ಯಕ್ಷಿಕೆ, ಗೋಷ್ಠಿ ಹಾಗೂ ಪ್ರಸಂಗ ಪ್ರದರ್ಶನ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕ ಯು. ಮಧುಸೂದನ್ ಐತಾಳ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅಂದು ಬೆಳಿಗ್ಗೆ 11ಕ್ಕೆ ‘ಯಕ್ಷಗಾನ ಹೆಜ್ಜೆ’ ಕಾರ್ಯಕ್ರಮವನ್ನು ಉಡುಪಿಯ ಸಂಜೀವ ಸುವರ್ಣ ನಡೆಸಿಕೊಡುವರು.
ಮಧ್ಯಾಹ್ನ 12.30ಕ್ಕೆ ಅಭಿರುಚಿ ಭಾರತೀಯ ಸಾಂಸ್ಕೃತಿ ವೇದಿಕೆಯಿಂದ ‘ರಾಮನಿರ್ಯಾಣ’ ಪ್ರಾತ್ಯಕ್ಷಿಕೆ ಇದೆ. 2.30ಕ್ಕೆ ಕೃಷ್ಣಮೂರ್ತಿ ತುಂಗ ಅವರಿಂದ ‘ವಸ್ತ್ರಾಲಂಕಾರ’, ಮ.3ಕ್ಕೆ ಕಾಸರಗೋಡಿನ ಮಹಿಳಾ ಕಲಾವಿದರ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದಿಂದ ‘ಮಹಿಳಾ ಭಾಗವತಿಕೆ’, 3.30ಕ್ಕೆ ಶಿವಮೊಗ್ಗದ ಯಕ್ಷವಲ್ಲರಿ ಮಹಿಳಾ ಯಕ್ಷಕಲಾ ತಂಡದಿಂದ ‘ಹೂವಿನ ಕೋಲು’, ಸಂಜೆ. 4.30ಕ್ಕೆ ಬೆಂಗಳೂರಿನ ಮಹಿಳಾ ಕಲಾವಿದರ ಯಕ್ಷಕಲಾ ಅಕಾಡೆಮಿಯಿಂದ ‘ವೀರ ವೃಷಸೇನ’ ಯಕ್ಷಗಾನ ಪ್ರದರ್ಶನವಿದೆ. ಅಲ್ಲದೇ, ಅಂದು ಸಂಜೆ 7ಕ್ಕೆ ಕಲಾವಿದೆ ವರದಾ ಮಧುಸೂದನ ಐತಾಳ್ ಅವರಿಂದ ಏಕವ್ಯಕ್ತಿ ಯಕ್ಷಗಾನ ‘ಮಮ ಪ್ರಾಣಾಹಿ ಪಾಂಡವಾಃ’ ಪ್ರಸಂಗವಿದೆ ಎಂದು ವಿವರಿಸಿದರು.
ಇದಲ್ಲದೇ, ಅಂದು ಬೆಳಿಗ್ಗೆ 11.30ಕ್ಕೆ ‘ಮಹಿಳಾ ಯಕ್ಷಗಾನ-ಅವಲೋಕನ ಮತ್ತು ಮುನ್ನೋಟ’ ಕುರಿತು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಹೊಸ್ತೋಟ ಮಂಜುನಾಥ ಭಾಗವತರು, ಡಾ.ಪ್ರಜ್ಞಾ ಮತ್ತಿಹಳ್ಳಿ, ಗೌರಿ ಶ್ರೀನಿವಾಸ ವಿಚಾರ ಮಂಡಿಸುವರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರರಾವ್, ಡಾ.ಜಿ.ಎಸ್. ಭಟ್, ಎಸ್.ವೈ. ಅರುಣಾದೇವಿ, ಎಂ.ಎನ್. ವೈಶಾಲಿ, ಸಮಾರೋಪದಲ್ಲಿ ನಾಗರಾಜಮೂರ್ತಿ, ಲಕ್ಷ್ಮೀನಾರಾಯಣ ಕಾಶಿ ಮತ್ತಿತರರು ಪಾಲ್ಗೊಳ್ಳುವರು ಎಂದರು. ಸುದ್ದಿಗೋಷ್ಠಿಯಲ್ಲಿ ವಿದ್ವಾನ್ ದತ್ತಮೂರ್ತಿ ಭಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ್, ವರದಾ ಮಧುಸೂದನ ಐತಾಳ್, ಸಂಘಟಕ ಪಾಂಡುರಂಗ ಉಪಸ್ಥಿತರಿದ್ದರು.