ನವದೆಹಲಿ (ಪಿಟಿಐ): ಭಾರಿ ಸಾಲ ಇರುವಾಗ ಎರಡು ವಿಮಾನಯಾನ ಸಂಸ್ಥೆಗಳನ್ನು ವಿಲೀನಗೊಳಿಸಿರುವುದು ಮತ್ತು ಹೊಸದಾಗಿ ವಿಮಾನಗಳನ್ನು ಖರೀದಿಸಿದ್ದಾದರೂ ಯಾಕೆ ಎಂದು ಏರ್ ಇಂಡಿಯಾವನ್ನು ಪ್ರಶ್ನಿಸಿರುವ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ), ಒಂದು ವಾರದ ಒಳಗಾಗಿ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ತನಗೆ ಸಲ್ಲಿಸುವಂತೆ ಸೂಚಿಸಿದೆ.
ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಮಹಾಲೇಖಪಾಲರು ನೀಡಿರುವ ವರದಿಯ ಆಧಾರದ ಮೇಲೆ ಸಮಿತಿಯು ಏರ್ ಇಂಡಿಯಾದಿಂದ ಈ ವಿವರಣೆ ಕೋರಿದೆ. ಭಾರಿ ಋಣ ಭಾರ ಇರುವಂತಹ ಸಂದರ್ಭದಲ್ಲಿ ಏರ್ ಇಂಡಿಯಾ 111 ವಿಮಾನಗಳನ್ನು ಖರೀದಿಸಿ ಸಂಸ್ಥೆಯ ಮೇಲೆ ಇನ್ನಷ್ಟು ಹೆಚ್ಚಿನ ಹೊರೆ ಬೀಳುವಂತೆ ಮಾಡಿದ್ದು, ಸರ್ಕಾರಕ್ಕೆ ಇದು ಎಚ್ಚರಿಕೆಯ ಕರೆಗಂಟೆ ಎಂದು ಮಹಾಲೇಖಪಾಲರ ವರದಿ ಉಲ್ಲೇಖಿಸಿತ್ತು.
ಪ್ರಯಾಣಿಕರಿಗೆ ಕಳಪೆ ದರ್ಜೆಯ ಸೇವೆ ನೀಡುತ್ತಿರುವುದಕ್ಕೂ ಸಮಿತಿ ಕೆಂಡಾಮಂಡಲವಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಟ್ಟಿದ್ದರಿಂದ ಈ ಎರಡು ವಿಮಾನಯಾನ ಸಂಸ್ಥೆಗಳನ್ನು ವಿಲೀನಗೊಳಿಸುವಂತೆ ಸೂಚಿಸಿದ್ದರಿಂದ ಹೀಗೆ ಮಾಡಲಾಯಿತು ಎಂದು ಅಧಿಕಾರಿಗಳು ಪಿಎಸಿ ಎದುರು ಹೇಳಿದ್ದಾರೆ.