ಹುಬ್ಬಳ್ಳಿ: ನಗರದ ಎಸ್.ಎಂ. ಕೃಷ್ಣನಗರ ಆಶ್ರಯ ಬಡಾವಣೆಗಳಲ್ಲಿ ಅನೇಕ ವರ್ಷಗಳಿಂದ ಅಧಿಕೃತವಾಗಿ ವಾಸವಾಗಿರುವ ಫಲಾನುಭವಿಗಳನ್ನು ಒಕ್ಕಲೆಬ್ಬಿಸುವುದಿಲ್ಲ. ಈ ಬಗ್ಗೆ ಆತಂಕ ಬೇಡ~ ಎಂದು ಶಾಸಕ ವೀರಭದ್ರಪ್ಪ ಹಾಲಹರವಿ ಭರವಸೆ ನೀಡಿದರು.
ಎಸ್.ಎಂ. ಕೃಷ್ಣನಗರದಲ್ಲಿ ಆಶ್ರಯ ಫಲಾನುಭವಿಗಳೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. `ಅನಧಿಕೃತವಾಗಿ ವಾಸವಾಗಿರುವ ನಿವಾಸಿಗಳಿಗೆ ಮನೆ ತೆರವುಗೊಳಿಸುವ ಪತ್ರವನ್ನು ಪಾಲಿಕೆ ಆಯುಕ್ತರು ಈಗಾಗಲೇ ನೀಡಿದ್ದಾರೆ. ಈ ಸಂಬಂಧ ಆಯುಕ್ತರೊಂದಿಗೆ ಚರ್ಚಿಸುವೆ~ ಎಂದರು.
`ಎಸ್.ಎಂ. ಕೃಷ್ಣನಗರ ಆಶ್ರಯ ನಿವಾಸಿಗಳಿಗೆ ಮಲಪ್ರಭಾ 3ನೇ ಹಂತದ ಕುಡಿಯುವ ನೀರಿನ ಯೋಜನೆ ಅಭಿವೃದ್ಧಿಯಲ್ಲಿದೆ. ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಸದ್ಯ ಪೈಪ್ಲೈನ್ ಜೋಡಣೆ ನಡೆಯುತ್ತಿದೆ. ಬಯಲು ಸೀಮೆ ಅಭಿವೃದ್ಧಿ ಯೋಜನೆಯಡಿಯಲ್ಲಿ ರಸ್ತೆಗಳು ನಿರ್ಮಾಣವಾಗಿವೆ.
ಇದರೊಂದಿಗೆ ಪೊಲೀಸ್ ಠಾಣೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ~ ಎಂದು ತಿಳಿಸಿದರು.ವಿಶ್ವಕಲ್ಯಾಣ ಸಹಕಾರ ಬ್ಯಾಂಕಿನ ಸಭೆ
ಹುಬ್ಬಳ್ಳಿ: ವಿಶ್ವ ಕಲ್ಯಾಣ ಸಹಕಾರ ಬ್ಯಾಂಕಿನ 18ನೇ ವಾರ್ಷಿಕ ಸಭೆ ನಗರದ ದೇಶಪಾಂಡೆನಗರದಲ್ಲಿ ಈಚೆಗೆ ನಡೆಯಿತು.ಮುಖ್ಯ ಅತಿಥಿಯಾಗಿ ಗಣ್ಯ ವರ್ತಕ ಮಹಾಲಿಂಗೇಶ್ವರ ಜಿಗಳೂರ ಹಾಗೂ ಸಜ್ಜನ ಗಾಣಿಗ ಸಮಾಜದ ಮಾಜಿ ಅಧ್ಯಕ್ಷ ಎಸ್.ಎಸ್. ಗುಂಜಾಳ ಭಾಗವಹಿಸಿದ್ದರು.
ಬ್ಯಾಂಕಿನ ಅಧ್ಯಕ್ಷ ಅಂದಾನಪ್ಪ ವೀ. ಸಜ್ಜನರ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಚೆನ್ನಬಸಪ್ಪ ಇಳಕಲ್ಲ, ಸಿದ್ರಾಮಪ್ಪ ಹರ್ಲಾಪುರ, ಎಚ್.ಎಸ್. ವಿಶ್ವನಾಥ ಹಾಗೂ ಸರೋಜಾ ಜಿ. ಅಗೂಟಿ ಹಾಜರಿದ್ದರು.
ಬ್ಯಾಂಕಿನ ನಿರ್ದೇಶಕ ಸಂಗಮೇಶ ಎಂ. ಸಜ್ಜನರ ಸ್ವಾಗತಿಸಿದರು. ಉಪಾಧ್ಯಕ್ಷ ಶಿವಕುಮಾರ ಜಿಗಳೂರ ಅತಿಥಿಗಳನ್ನು ಪರಿಚಯಿಸಿದರು. ಅಡಾವ ಪತ್ರಿಕೆಯನ್ನು ಜಯಶ್ರೀ ನಾಗರಹಳ್ಳಿ ಓದಿದರು. ಮಾಧವಿ ಹರ್ಲಾಪುರ ಅಂದಾಜು ಪತ್ರಿಕೆಯನ್ನು ಓದಿದರು. ಬ್ಯಾಂಕಿನ ಮುಂದಿನ ಯೋಜನೆಗಳನ್ನು ರತ್ನಾ ಎಂ. ಕಲ್ಲಾಪುರ ವಿವರಿಸಿದರು.