ಹುಲಸೂರು: ಪೋಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಬೇಟಬಾಲಕುಂದಾ ಕೆರೆ ಗುರುವಾರ ಒಡೆದಿದ್ದು, ಅಪಾರ ಪ್ರಮಾಣದ ನೀರು ಪೋಲಾಗಿದೆ. 1972 ರ ದಶಕದಲ್ಲಿ ನಿರ್ಮಾಣ ಮಾಡಿರುವ ಕೆರೆಗೆ ಬರೋಬ್ಬರಿ 38 ವರ್ಷ ಎಂದು ಗ್ರಾಮದ ಜನ ಹೇಳುತ್ತಾರೆ. ಕೆರೆಯಿಂದ ಈ ಭಾಗದ ರೈತರ ನೀರಾವರಿಗೆ ಅನುಕೂಲವಾಗಿದೆ. ಸಮರ್ಪಕ ಮಳೆಯಾಗದ್ದರಿಂದ ಕಳೆದ ಹತ್ತು ವರ್ಷಗಳಿಂದ ಕೆರೆ ತುಂಬಿರಲಿಲ್ಲ, ಆದರೆ ಈ ವರ್ಷದ ಭಾರೀ ಮಳೆಗೆ ಕೆರೆ ತುಂಬಿ ತುಳುಕಿತು. ತುಂಬಿದ ಕೆರೆಯನ್ನು ನೋಡಿ ಜನರು ಸಂತೋಷ ಪಟ್ಟರು. ಆದರೆ ಮಳೆಗಾಲದಲ್ಲಿಯೇ ಕೆರೆಯು ಈಗ ಒಡೆದಿರುವ ಜಾಗದಲ್ಲಿ ಸಣ್ಣದಾಗಿ ನೀರು ಸೋರಿಕೆಯಾಗುವುದು ಅಲ್ಲಿನ ರೈತರು ನೋಡಿ, ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ತಮಗೆ ಸಂಬಂಧವಿಲ್ಲದವರಂತೆ ವರ್ತಿಸಿದರು, ಈಗ ಕೆರೆಯ ಒಡ್ಡು ಒಡೆದು ಹೋಗಿರುವುದಕ್ಕೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು, ಕೆರೆಯ ಸಮೀಪ ಹೊಲ ಹೊಂದಿರುವ, ವೈಜಿನಾಥ ಮೇತ್ರೆ, ಅಂಗದರಾವ ಬಿರಾದಾರ, ಮಾರುತಿ ಮೇತ್ರೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ದುರಸ್ತಿ: ಪೋಲಾಗುತ್ತಿರುವ ಕೆರೆಯ ನೀರನ್ನು ತಡೆಯಲು ಸಿಮೆಂಟ್ ಚೀಲದಲ್ಲಿ ಮರಳನ್ನು ತುಂಬಿ ರಂಧ್ರ ಮುಚ್ಚುವ ಪ್ರಯತ್ನ ಮಾಡಲಾಗುತ್ತಿದೆ, ಆದರೆ ಶುಕ್ರವಾರ ಬೆಳಿಗ್ಗೆಯಿಂದ ಪ್ರಯತ್ನಿಸಿದರೂ ನೀರು ಪೋಲಾಗುತ್ತಿರುವ ಜಾಗ ಮಾತ್ರ ಸಂಜೆಯವರೆಗೂ ಪತ್ತೆಯಾಗಿಲ್ಲ ನೀರು ಹರಿಯುತ್ತಲೇ ಇದೆ. ಹಾಗೂ ನೀರಿನ ಒತ್ತಡ ಕಡಿಮೆ ಮಾಡಲು ತೂಬಿನಿಂದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದಾರೆ.