ನಂಜನಗೂಡು: ಕಬಿನಿ ಬಲದಂಡೆ ನಾಲೆಯ 35ನೇ ವಿತರಣಾ ನಾಲೆ ವ್ಯಾಪ್ತಿಗೆ ಒಳಪಡುವ ಇಗ್ಲಿ, ಸಾಲುಂಡಿ ಅಚ್ಚುಕಟ್ಟು ಪ್ರದೇಶದ ನೂರಾರು ಎಕರೆ ಜಮೀನಿಗೆ ನೀರಿನ ಕೊರತೆ ಉಂಟಾಗಿ ಬತ್ತದ ಫಸಲು ಹಾಳಾದ ಹಿನ್ನೆಲೆಯಲ್ಲಿ ರೈತರೇ ಸ್ವತಃ ಗದ್ದೆಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನ ಮುಂಗಾರು ಮಳೆ ಕೊರತೆಯಿಂದ ಕಬಿನಿ ಜಲಾಶಯ ಸಕಾಲದಲ್ಲಿ ಭರ್ತಿಯಾಗಲಿಲ್ಲ. ಜುಲೈ ಅಂತ್ಯದಲ್ಲಿ ಜಲಾಶಯದ ನೀರಿನ ಮಟ್ಟ ಸುಧಾರಿಸಿದರೂ, ಎಂದಿನಂತೆ ಪ್ರವಾಹೋಪಾದಿಯಲ್ಲಿ ನೀರು ಹರಿಯಲಿಲ್ಲ. ಈ ನಡುವೆ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಬಿನಿ ಜಲಾಶಯದಿಂದ ನೀರು ಹರಿಸಲಾಯಿತು.
ಅದರ ಪರಿಣಾಮ ಕಬಿನಿ ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಫಸಲಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸದೇ, ಕಟ್ಟು ನೀರು ಬಿಡುವ ಪದ್ಧತಿ ಅನುಸರಿಸಲಾಯಿತು.
ಇದರಿಂದ ತಾಲ್ಲೂಕಿನ ಸಾವಿರಾರು ಎಕರೆ ಪ್ರದೇಶಕ್ಕೆ ಸಮೃದ್ಧ ನೀರು ಸಿಗದೆ ಬತ್ತ, ರಾಗಿ, ಇತರೆ ಫಸಲು ಒಣಗಿ ಹೋದವು. ಹೀಗೆ ಸಾಲುಂಡಿ, ಇಗ್ಲಿ ಭಾಗದ ಜಮೀನಿನಲ್ಲಿ ಒಣಗಿ ಹೋದ ಬತ್ತದ ಕುರುಚಲು ಪೈರಿಗೆ ಬುಧವಾರ ಸಾಲುಂಡಿಯ ಜಯಪ್ಪ, ಸಿದ್ದರಾಜು ಬೆಂಕಿ ಹಚ್ಚಿ, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.