ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ ವರ್ಗೀಕರಣಕ್ಕೆ ಆಗ್ರಹ

Last Updated 7 ಡಿಸೆಂಬರ್ 2012, 5:24 IST
ಅಕ್ಷರ ಗಾತ್ರ

ದಾವಣಗೆರೆ: ಬೆಳಗಾವಿ ಅಧಿವೇಶನದಲ್ಲಿ ನ್ಯಾ.ಎ.ಜೆ. ಸದಾಶಿವ ನೇತೃತ್ವ ಆಯೋಗ ಸಲ್ಲಿಸಿರುವ ಒಳಮೀಸಲಾತಿ ವರ್ಗೀಕರಣವನ್ನು ಸದನದಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಮಹಾನಗರ ಪಾಲಿಕೆಯ 23ನೇ ವಾರ್ಡಿನ ಆವರಗೆರೆ ವಿಭಾಗದ ದನದ ಓಣಿಯಲ್ಲಿ 20 ವರ್ಷಗಳಿಂದ ವಾಸವಾಗಿರುವ 45 ಕುಟುಂಬಕ್ಕೆ ಹಕ್ಕುಪತ್ರ ನೀಡುವ ಮೂಲಕ ಮೂಲಸೌಕರ್ಯ ಒದಗಿಸಬೇಕು. ಹೈಟೆನ್ಷನ್ ವಯರ್ ಕೆಳಭಾಗದಲ್ಲಿ ಮತ್ತು ಆವರಗೆರೆಯ ದೊಡ್ಡ ಹಳ್ಳದ ದಂಡೆಯ ಮೇಲೆ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ಬದುಕುತ್ತಿರುವವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯಲ್ಲಿರುವ ಬಗರ್‌ಹಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ವಿತರಿಸಬೇಕು. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮರಣ ಹೊಂದಿದ ವ್ಯಕ್ತಿಗೆ ಗ್ರಾ.ಪಂ. ವತಿಯಿಂದ ಶವಸಂಸ್ಕಾರಕ್ಕೆರೂ. 10 ಸಾವಿರ ನೀಡಬೇಕು.

ಜಿಲ್ಲೆಯಲ್ಲಿ ಸ್ಮಶಾನ ಕೊರತೆ ಇರುವ ಗ್ರಾಮಗಳಿಗೆ ಕೂಡಲೇ ಸ್ಮಶಾನ ಜಮೀನು ನೀಡಬೇಕು. ಎಸ್‌ಜೆ ಎಂ ನಗರದಲ್ಲಿ ದಲಿತ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮೀಸಲಿಡಬೇಕು. ಆವರಗೆರೆ ಸರ್ವೇ ನಂ. 217ರಲ್ಲಿ ಒಟ್ಟು 187 ಎಕರೆ 22 ಗುಂಟೆ ಜಮೀನಿದ್ದು, ವಿವಿಧ ಇಲಾಖೆಗಳಿಗೆ ಮೀಸಲಿರಿಸಿ, ಉಳಿದ 58 ಎಕರೆ ಜಮೀನು ಹಾಗೂ ಹೊಯ್ಸಳ ವಿದ್ಯಾಸಂಸ್ಥೆಗೆ ನೀಡಿದ 3 ಎಕರೆ ಜಮೀನು ರಾಜ್ಯ ಹೈಕೋರ್ಟ್ ವಾಪಸ್ ಪಡೆಯುವಂತೆ ಆದೇಶ ನೀಡಿದ್ದರೂ, ಜಿಲ್ಲಾಡಳಿತ ಹಿಂಪಡೆದಿಲ್ಲ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಈ ಪ್ರಕರಣಕ್ಕೆ ರಾಜ್ಯ ಸರ್ಕಾರ ಈ ಕೂಡಲೇ ಸರ್ಕಾರಿ ವಕೀಲರನ್ನು ನೇಮಕ ಮಾಡಿ ಅದರಲ್ಲಿ ನಿವೇಶನ, ಮನೆ ನಿರ್ಮಿಸಿ ದಲಿತ ಕಾಲೊನಿಗಳಿಗೆ ವಿತರಸಬೇಕು. ಜಿಲ್ಲೆಯ ಎಲ್ಲಾ ದಲಿತ ಕಾಲೊನಿಗಳು ಕೊಳೆಗೇರಿಗಳಂತಾಗಿವೆ.

ಮಳೆಗಾಲದಲ್ಲಿ ಜನರ ಬದುಕು ಅತಂತ್ರವಾಗಿದೆ. ನಗರದಲ್ಲಿನ ದಲಿತರ ಕಾಲೊನಿಗಳು ರೋಗಗ್ರಸ್ತವಾಗಿವೆ. ಸರ್ಕಾರ ದಲಿತರ ಅಭ್ಯುದಯಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರಿಯಾಗಿ ಬಳಕೆ ಮಾಡದೇ ನಿರ್ಲಕ್ಷ ತೋರುತ್ತಿದ್ದಾರೆ. ಕೂಡಲೇ ಸರ್ಕಾರ ಗಮನ ಹರಿಸಿ ದಲಿತರ ಏಳಿಗೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಹಕ್ಕೊತ್ತಾಯ ಮಂಡಿಸಲಾಗಿದೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಕೆ.ಎಂ. ಅಂಜಿನಪ್ಪ, ಪುಣಭಗಟ್ಟೆ ನಿಂಗಪ್ಪ, ತಾಲ್ಲೂಕು ಸಂಚಾಲಕ ಹೂವಿನಮಡು ಅಂಜಿನಪ್ಪ, ಕಾರಿಗನೂರು ನಾಗರಾಜ್, ಆನೆಕೊಂಡ ನಾಗರಾಜ್, ಚಿಕ್ಕನಹಳ್ಳಿ ಸಮೀವುಲ್ಲ, ಆನಗೋಡು ಸುರೇಶ್, ಕತ್ತಲಗೆರೆ ಬಸವರಾಜ್, ಬೆಳವನೂರು ದೇವೇಂದ್ರಪ್ಪ, ಗುಮ್ಮನೂರು ರಾಮಚಂದ್ರ, ಕಬ್ಬಳ ಮೈಲಪ್ಪ, ಗಂಗನಕಟ್ಟೆ ರೇವಣಸಿದ್ದಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT