ಬೆಂಗಳೂರು: ‘ಸಿಂಧೂ ನಾಗರಿಕತೆಯ ಹರಪ್ಪ ಮತ್ತು -ಮೊಹೆಂಜೊದಾರೊ ಸೇರಿದಂತೆ ಹಿಂದೆ ರಾಜರ ಆಳ್ವಿಕೆಯಲ್ಲಿ ನಿರ್ಮಾಣವಾದ ಉತ್ತಮ ರಸ್ತೆಗಳ ಮಾದರಿಗಳು ನಮ್ಮ ಮುಂದಿವೆ. ಅವುಗಳನ್ನು ಸ್ವಲ್ಪ ಗಮನಿಸಿ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಗಳವಾರ ಹೈಕೋರ್ಟ್ ಕಿವಿಮಾತು ಹೇಳಿದೆ.
ಸಮಗ್ರ ನಗರಾಭಿವೃದ್ಧಿ ಯೋಜನೆ–2015ಕ್ಕೆ (ಮಾಸ್ಟರ್ಪ್ಲಾನ್-೨೦೧೫) ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ವಿಭಾಗೀಯ ಪೀಠ, ಬೆಂಗಳೂರಿನಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡುವತ್ತ ಬಿಡಿಎ ಗಮನ ಹರಿಸಬೇಕು ಎಂದು ತಿಳಿಸಿದೆ.
ರಾಜರ ಆಳ್ವಿಕೆಯಲ್ಲಿ ನಿರ್ಮಿಸಿದ್ದ ಮೈಸೂರಿನ ರಸ್ತೆಗಳು ಈಗಲೂ ಚೆನ್ನಾಗಿವೆ. ಅವುಗಳನ್ನು ನೋಡಿಯಾದರೂ ಇಲ್ಲಿ ಉತ್ತಮ ರಸ್ತೆಗಳ ನಿರ್ಮಾಣ ಹಾಗೂ ವಾಹನ ನಿಲುಗಡೆ ಸಂಕೀರ್ಣಗಳನ್ನು ನಿರ್ಮಾಣ ಮಾಡುವಂತೆ ಸೂಚನೆ ನೀಡಿದೆ.
ನಾಲ್ಕು ಗೋಪುರಗಳ ಒಳ ಭಾಗದಲ್ಲಿದ್ದ ಬೆಂಗಳೂರು, ಈಗ ಅವನ್ನೂ ಮೀರಿ ಬೆಳೆದಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ಅಗತ್ಯ ಹಾಗೂ ಅವಶ್ಯಕತೆಗಳಿಗೆ ತಕ್ಕಂತೆ ರಸ್ತೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದೆ.
ಸರ್ಕಾರ ಹಮ್ಮಿಕೊಳ್ಳುವ ಯೋಜನೆಗಳಿಗೆ ಕನಿಷ್ಠ ೨೦–೩೦ ವರ್ಷಗಳಷ್ಟು ದೂರದೃಷ್ಟಿ ಇರಬೇಕು. ಹೊಸದಾಗಿ ನಿರ್ಮಿಸುತ್ತಿರುವ ಬಡಾವಣೆಗಳಲ್ಲಿ ಜನ ವಸತಿ ಜತೆಗೆ ರಸ್ತೆ ಹಾಗೂ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕಿವಿಮಾತು ಹೇಳಿದ ಪೀಠ, ವಿಚಾರಣೆಯನ್ನು ಇದೇ ೨೧ಕ್ಕೆ ಮುಂದೂಡಿತು.
ನಗರದ ಈಜಿಪುರದಲ್ಲಿನ ಇಡಬ್ಲೂಎಸ್ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಮೇವರಿಕ್ ಹೋಲ್ಡಿಂಗ್ ಸಂಸ್ಥೆ ಮಧ್ಯಂತರ ಅರ್ಜಿ ಸಲ್ಲಿಸಿದೆ. ಅಲ್ಲಿನ ಜನರು ಸೂಕ್ತ ವಸತಿ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ವಸತಿ ಕಲ್ಪಿಸಲು ಅನುಮತಿ ನೀಡುವಂತೆ ಬಿಡಿಎಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇದರ ವಿಚಾರಣೆಯೂ 21ಕ್ಕೆ ಬರಲಿದೆ.