ಕೃಷ್ಣರಾಜಪುರ: ದೂರವಾಣಿ ನಗರ ಕೇರಳ ಸಮಾಜದ ವತಿಯಿಂದ ಜ್ಯುಬಿಲಿ ಶಾಲಾ ಆವರಣದಲ್ಲಿ ಓಣಂ ಹಬ್ಬದ ನಿಮಿತ್ತ ಆಯೋಜಿಸಿರುವ ಐದು ದಿನಗಳ ಸಂತೆ ಹಾಗೂ ಶಾಲಾ ಹೆಚ್ಚುವರಿ ಕೊಠಡಿಗಳನ್ನು ಬಿಬಿಎಂಪಿ ಸದಸ್ಯ ಎನ್.ಬಸವರಾಜು ಉದ್ಘಾಟಿಸಿದರು.
`ಕೆಳ- ಮಧ್ಯಮ ವರ್ಗದ ಮಕ್ಕಳಿಗೆ ಖಾಸಗಿ ಶಾಲೆಗಳು ಆಸರೆಯಾಗಬೇಕು. ಶಾಲೆಯಲ್ಲಿ ಓದುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಮಾಹಿತಿ ನೀಡಿದರೆ 10ನೇ ತರಗತಿವರೆಗೆ ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು~ ಎಂದು ಅವರು ಭರವಸೆ ನೀಡಿದರು.
`ಕೃಷ್ಣರಾಜಪುರ ಭಾಗದಲ್ಲಿ ಅನ್ಯ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡಿದರೆ ಐಕ್ಯತೆ ಸಾಧಿಸಿದಂತಾಗುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳ ವಿನಿಮಯದಿಂದ ಮಾತ್ರ ಸುಮಧುರ ಬಾಂಧವ್ಯಕ್ಕೆ ಒತ್ತು ನೀಡಿದಂತೆ ಆಗುತ್ತದೆ~ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪೀಟರ್ ಜಾರ್ಜ್ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಜಿ.ಎ. ಮುನಿರಾಜು, ಶಾಲೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡೆನ್ನಿಸ್ ಬಾಲ್, ಸದಸ್ಯರಾದ ಗಿರೀಶ್, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.