ಬೆಂಗಳೂರು: ಕಂದಾಯ ವಸೂಲಾತಿಯಲ್ಲಿ ನಿರ್ಲಕ್ಷ್ಯ ತೋರಿದ ಪೂರ್ವ ವಲಯದ ೧೨ ಜನ ಸಹ ಕಂದಾಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದರು. ಪೂರ್ವ ವಲಯದ ಕಚೆೇರಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಣೆ ಕುರಿತು ಸೋಮವಾರ ಪರಿಶೀಲನಾ ಸಭೆ ನಡೆಸಿದ ಸಚಿವರು, ಕಡಿಮೆ ತೆರಿಗೆ ವಸೂಲಿ ಪ್ರಮಾಣದಿಂದ ಅಸಮಾಧಾನಗೊಂಡು ಈ ಸೂಚನೆ ನೀಡಿದರು.
ಪ್ರತಿ ವಿಭಾಗವಾರು ಇದುವರೆಗೆ ಸಂಗ್ರಹಿಸಲಾದ ಮತ್ತು ಬಾಕಿ ಉಳಿದ ಆಸ್ತಿ ತೆರಿಗೆ ವಿವರಗಳನ್ನು ಪಡೆದರು. ಪೂರ್ವ ವಲಯದಲ್ಲಿ ಇದುವರೆಗೆ ನಿಗದಿಪಡಿಸಿದ ಗುರಿಯಲ್ಲಿ ಶೇ ೪೦ರಷ್ಟು ಮಾತ್ರ ವಸೂಲಿ ಮಾಡಲಾಗಿದೆ. ಸಹ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೂರ್ವ ವಲಯದಲ್ಲಿ ಆಸ್ತಿ ತೆರಿಗೆ ಸಂಗ್ರಹಣೆ ಗುರಿ ₨ ೪೬೮ ಕೋಟಿ ಇದ್ದು, ಅದರಲ್ಲಿ ₨೨೮೭ ಕೋಟಿ ಮಾತ್ರ ಸಂಗ್ರಹವಾಗಿದೆ. ಬಾಕಿ ಮೊತ್ತ ಒಂದು ತಿಂಗಳಲ್ಲಿ ವಸೂಲಿ ಮಾಡಬೇಕು ಎಂದು ವಲಯ ಜಂಟಿ ಆಯುಕ್ತರು, ಕಂದಾಯ ಅಧಿಕಾರಿಗಳಿಗೆ ಆದೇಶಿಸಿದರು. ಮೇಯರ್ ಬಿ.ಎಸ್. ಸತ್ಯನಾರಾಯಣ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ.
ಪ್ರತಿದಿನ ಕನಿಷ್ಠ ೨೫ ಮನೆಗಳಿಗೆ ಭೇಟಿ ನೀಡಿ, ಆಸ್ತಿ ತೆರಿಗೆ ಸಂಗ್ರಹಣೆಗೆ ಪ್ರಯತ್ನಿಸಬೇಕು. ಆದರೆ, ಇದುವರೆಗೂ ಒಬ್ಬ ಅಧಿಕಾರಿಯೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ತಿಂಗಳಲ್ಲಿ ಸಾಕಷ್ಟು ಪ್ರಗತಿ ತೋರಿಸಬೇಕು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಎಂ.ಎಸ್. ಶಿವಪ್ರಸಾದ್, ಆಸ್ತಿ ತೆರಿಗೆ ಸಂಗ್ರಹಣೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಲು ಈಗಾಗಲೇ ವಲಯವಾರು ವೇಳಾಪಟ್ಟಿಯನ್ನು ತಯಾರಿಸಲಾಗಿದ್ದು, ಅದರಂತೆ ಕಟ್ಟುನಿಟ್ಟಾಗಿ ಸಭೆಗಳನ್ನು ನಡೆಸಿ, ಕಂದಾಯ ವಸೂಲಾತಿಗೆ ಒತ್ತು ನೀಡಲಾಗುವುದು ಮತ್ತು ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಸೋಮಶೇಖರ್, ಪಾಲಿಕೆಯ ಆಯುಕ್ತ ಎಂ. ಲಕ್ಷ್ಮೀನಾರಾಯಣ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.