ಕಾರ್ಕಳ: ಪ್ರಮುಖ ಸಂಶೋಧನೆಗಳು ಕಂಪ್ಯೂಟರ್ ಕ್ಷೇತ್ರಗಳಲ್ಲಿ ಆಗುತ್ತಿವೆ ಅಥವಾ ಕಂಪ್ಯೂಟರ್ ಬಳಸಿದ ಕ್ಷೇತ್ರಗಳಲ್ಲಾಗುತ್ತಿವೆ ಎಂದು ಪೆನ್ಸ್ಟೇಟ್ ವಿವಿಯ ಸಹಡೀನ್ ಪ್ರೊ.ಒಮಿದ್ ಅನ್ಸಾರಿ ತಿಳಿಸಿದರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಂಭ್ರಮ ಸಭಾಂಗಣದಲ್ಲಿ ಶುಕ್ರವಾರ ಕಂಪ್ಯೂಟರ್ ಆರ್ಕಿಟೆಕ್ಚರ್, ನೆಟ್ವರ್ಕಿಂಗ್ ಮತ್ತು ಅಪ್ಲಿಕೇಶನ್ಸ್ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಂಪ್ಯೂಟರ್ಗಳು ಐದು ತಲೆಮಾರಿನ ಪ್ರಗತಿ ಕಂಡಿವೆ. ಮೊದಲನೆ ತಲೆಮಾರಿನ ಕಂಪ್ಯೂಟರ್ಗಳು ನಿರ್ವಾತ ನಳಿಗೆಗಳನ್ನು ಹೊಂದಿದ್ದು ಎರಡನೆ ತಲೆಮಾರಿನವು ಟ್ರಾನ್ಸಿಸ್ಟರ್ಗಳನ್ನು ಬಳಸಿದ್ದವು. ನಂತರದ ಕಂಪ್ಯೂಟರ್ಗಳು ಕೀಲಿಮಣೆ ತೆರೆ, ಪ್ರಿಂಟರುಗಳನ್ನು ಬಳಸಲು ಅನುವು ಮಾಡಿದವು. ನಾಲ್ಕನೇ ತಲೆಮಾರಿನ ಕಂಪ್ಯೂಟರ್ಗಳು ಸಂಸ್ಕಾರಕಗಳನ್ನು ಬಳಸಿದ್ದವು. ಕಂಪ್ಯೂಟರ್ ಜಾಲಗಳು ಬಳಕೆಗೆ ಬಂದ ಐದನೇ ತಲೆಮಾರಿನಲ್ಲಿ ನಾವಿದ್ದೇವೆ ಎಂದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಎಂಜಿನಿಯರಿಂಗ್ ನಂತರದ ಹಂತ ಸಂಶೋಧನೆಯಾಗಬೇಕು. ಇಲ್ಲದಿದ್ದಲ್ಲಿ ಎಂಜಿನಿಯರಿಂಗ್ ಕೇವಲ ನಿಂತ ನೀರಾಗಿ ಬಿಡಬಹುದು. ದೊರೆತ ಅವಕಾಶಗಳನ್ನು ಉಪಯೋಗಿಸಿಕೊಂಡು ಆಧುನಿಕ ಸಂಶೋಧನಾ ರಂಗವನ್ನು ಶ್ರೀಮಂತಗೊಳಿಸಬೇಕು ಎಂದರು.
ಸಿಎಸ್ಐವಿ (ಇಆರ್) ವಿಭಾಗದ ಮುಖ್ಯಸ್ಥೆ ಪ್ರೊ.ಸ್ವರ್ಣಲತಾ ರಾವ್, ಹ್ಯಾರಿಸ್ಬರ್ಗ್ನ ಪೆನ್ಸ್ಟೇಟ್ ವಿವಿಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಅಲ್ಡೋ ಮೊರಾಸ್, ಡಾ.ಸಾಯಿರಾಮ್, ತಾಂತ್ರಿಕ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್.ವೈ.ಕುಲಕರ್ಣಿ, ಉಪಪ್ರಾಂಶುಪಾಲ ಡಾ.ನಿರಂಜನ್ ಚಿಪಳೂಣ್ಕರ್, ಸಂಯೋಜಕ ಪ್ರೊ.ಯುವರಾಜು, ಜಸ್ಟಿಸ್ ಕೆ.ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆ ನಿರ್ದೇಶಕ ಡಾ.ಎಂ.ಎಸ್. ಮೂಡಿತ್ತಾಯ, ಪ್ರೊ.ವಿನಯ್ ಇದ್ದರು.
ನಿಟ್ಟೆ ವಿದ್ಯಾಸಂಸ್ಥೆ, ದೆಹಲಿ ಐಎಸ್ಟಿಇ, ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯದ ವಿ(ಇ ಮತ್ತು ಆರ್) ವಿಭಾಗ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ., ಟಿಸಿಎಸ್, ಇಎಂಸಿ, ವೆರಿಗೈಡ್ ಮತ್ತು ರೊಬೋಸಾಫ್ಟ್ ಟೆಕ್ನಾಲಜಿ ಆಶ್ರಯದಲ್ಲಿ ಸಮ್ಮೇಳನ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.