ಶಿವಮೊಗ್ಗ: ಪವಿತ್ರವಾದ ಕಣ್ಣುಗಳು ನಮ್ಮ ಮರಣದ ನಂತರ ಸುಟ್ಟು ಬೂದಿಯಾಗಿ ಅಥವಾ ಮಣ್ಣಲ್ಲಿ ಮಣ್ಣಾಗುವ ಬದಲು ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು ಎಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಲೇಪಾಕ್ಷಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಕಣ್ಣಿನ ವಿಭಾಗದ ಆವರಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಇನ್ನರ್ ವ್ಹೀಲ್ ಶಿವಮೊಗ್ಗ ಪೂರ್ವ, ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಕ್ಲಬ್, ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣೆ, ಉಚಿತ ನೇತ್ರ ಶಸ್ತ್ರಚಿಕಿತ್ಸೆ ಮತ್ತು ಮಸೂರ ಆಳವಡಿಕೆಯ ಮೂರು ದಿನಗಳ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಪೂರ್ವ ಅಧ್ಯಕ್ಷ ಕೆ.ಬಿ. ರವಿಶಂಕರ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಣ್ಣರೆಡ್ಡಿ, ಲಯನ್ಸ್ ಕ್ಲಬ್ ತಾಜ್ಮೂಲ್ ಉಸೇನ್, ಕಾರ್ಯಕ್ರಮದ ಸಂಚಾಲಕ ಜಿ. ವಿಜಯಕುಮಾರ್, ಕಾರ್ಯದರ್ಶಿ ಎಂ.ಜಿ. ಕೇಶವಪ್ಪ, ಜಿಲ್ಲಾ ವ್ಯವಸ್ಥಾಪಕ ಡಾ.ರಾಥೋಡ್, ಇನ್ನರ್ವ್ಹೀಲ್ ಅಧ್ಯಕ್ಷೆ ಅನಿತಾ ರವಿಶಂಕರ್, ಕಾರ್ಯದರ್ಶಿ ಬಿಂದು ವಿಜಯಕುಮಾರ್, ಕಣ್ಣಿನ ವಿಭಾಗದ ಮುಖ್ಯಸ್ಥರಾದ ಡಾ.ಪ್ರದೀಪ್, ಡಾ.ರತ್ನಮ್ಮ, ಡಾ.ನಾಗಭೂಷಣ್ ಉಪಸ್ಥಿತರಿದ್ದರು. ಶಿಬಿರದಲ್ಲಿ 300ಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಲಾಯಿತು.