ಯಾದಗಿರಿ: ಜಿಲ್ಲೆಯ ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಿ ಗ್ರುಪ್ನ ಹೊರಗುತ್ತಿಗೆ ನೌಕರರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆಗಳ ಅಡಿಯಲ್ಲಿ ಬರುವ ವಸತಿ ನಿಲಯ, ವಸತಿ ಶಾಲೆಗಳು, ಮೊರಾರ್ಜಿ ದೇಸಾಯಿ, ಕಿತ್ತೂರು ಚೆನ್ನಮ್ಮ ವಸತಿ ಶಾಲೆಗಳಲ್ಲಿ ಸರ್ಕಾರದಿಂದ ಮಂಜೂರಾಗಿರುವ ಡಿ ಗ್ರುಪ್ನ ಖಾಲಿ ಹುದ್ದೆಗಳಲ್ಲಿ ಅಡುಗೆಯವರಾಗಿ, ಅಡುಗೆ ಸಹಾಯಕರಾಗಿ, ಕಾವಲುಗಾರರಾಗಿ, ಸಿಪಾಯಿಗಳಾಗಿ ಕಳೆದ 15-20 ವರ್ಷಗಳಿಂದ ನೂರಾರು ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಕಾರ್ಮಿಕರಿಗೆ ಕನಿಷ್ಠ ವೇತನ, ಪಿಎಫ್, ಇಎಸ್ಐ ರಜೆ ಮತ್ತಿತರ ಸೌಕರ್ಯ ಗಳನ್ನು ನೀಡುವಂತೆ ಆಗ್ರಹಿಸಿದರು.
ವಸತಿ ನಿಲಯಗಳ ಕಾರ್ಮಿಕರು ಮನೆಗೆ ಕೊಂಡೊಯ್ಯುವ ವೇತನವು ಎಲ್ಲ ಕಡಿತಗಳ ನಂತರ ಅಡುಗೆ ಸಿಬ್ಬಂದಿಗೆ ರೂ.3387, ಅಡುಗೆ ಸಹಾಯಕರಿಗೆ ರೂ.3,120 ನೀಡು ವಂತೆ ಹೊರಗುತ್ತಿಗೆ ಸಂಸ್ಥೆಯೊಂದಿಗೆ ಜಿಲ್ಲಾಡಳಿತ ಒಪ್ಪಂದ ಮಾಡಿಕೊಂಡಿದೆ. ಆದರೆ ಹೊರಗುತ್ತಿಗೆ ಸಂಸ್ಥೆಯು ಅಡುಗೆ ಸಿಬ್ಬಂದಿಗೆ ರೂ.2.600 ಹಾಗೂ ಅಡುಗೆ ಸಹಾಯಕರಿಗೆ ರೂ.2,400 ಚೆಕ್ ಮೂಲಕ ನೀಡು ತ್ತಿತ್ತು. ಇದೀಗ ಚೆಕ್ ವ್ಯವಸ್ಥೆ ನಿಲ್ಲಿಸಿ, ಕೈ ರಸೀದಿಯ ಆಧಾರದಲ್ಲಿ ವೇತನವನ್ನು ಪಡೆಯುವಂತೆ ನೌಕರರಿಗೆ ಬಲವಂತ ಮಾಡಲಾಗುತ್ತಿದೆ. ತೆಗೆದುಕೊಳ್ಳ ದಿದ್ದರೆ ಹುದ್ದೆಯಿಂದ ವಜಾ ಮಾಡುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಕನಿಷ್ಠ ವೇತನ ಕಾಯ್ದೆಯಂತೆ ವೇತನ ಪಾವತಿಸಬೇಕು. ಹಲವಾರು ತಿಂಗಳಿಂದ ಬಾಕಿ ನಿಂತಿರುವ ವೇತನ ವನ್ನು ಕೂಡಲೇ ಪಾವತಿಸಬೇಕು. ಶಾಸನಬದ್ಧ ಸೌಕರ್ಯಗಳಾದ ಪಿಎಫ್, ಇಎಸ್ಐ ಖಾತೆಗಳನ್ನು ತೆರೆದು, ಹಣ ಪಾವತಿಸಿರುವ ಕುರಿತು ಕಾರ್ಮಿಕರಿಗೆ ದಾಖಲೆಗಳನ್ನು ಒದಗಿಸ ಬೇಕು. ಟೆಂಡರ್ ಷರತ್ತಿನಂತೆ ಪ್ರತಿ ತಿಂಗಳು 5 ನೇ ತಾರೀಖಿನ ಒಳಗಾಗಿ ವೇತನ ಪಾವತಿಸಬೇಕು. ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ಚೆಕ್ ಮೂಲಕ ವೇತನ ನೀಡಬೇಕು. ತಿಂಗಳಿಗೆ ಒಂದು ರಜೆಯನ್ನು ಜಾರಿಗೊಳಿ ಸಬೇಕು. ಹೊರಗುತ್ತಿಗೆಯನ್ನು ಕೈಬಿಟ್ಟು ಈ ಹಿಂದಿನಂತೆ ಇಲಾಖೆಯಲ್ಲಿ ನೇರ ವಾಗಿ ಸೇವೆಗೆ ನಿಯೋಜನೆ ಮಾಡ ಬೇಕು ಎಂದು ಮನವಿ ಮಾಡಿದರು.
ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಸಂಚಾಲಕ ಕೆ. ಸೋಮಶೇಖರ, ಜಿಲ್ಲಾ ಸಮಿತಿ ಕಾರ್ಯದರ್ಶಿ ಗೋವಿಂದಗೌಡ, ಹಣ ಮಂತ, ಆಂಜನೇಯ, ಮೌನೇಶ, ನಾನಾಗೌಡ, ಶಂಕ್ರಮ್ಮ, ತಾಜುದ್ದೀನ, ಶಕುಂತಲಾ, ಅಂಬರೀಷ ಸೇರಿದಂತೆ ಹಲವಾರು ಕಾರ್ಮಿಕರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.