ಹೊಸಪೇಟೆ: ವಿಶ್ವವಿದ್ಯಾಲಯ ಅನುಮತಿ ಪಡೆಯದೆ ವ್ಯವಹಾರ ಮಾಡಿ, ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಡೀನ್ ಡಾ.ಟಿ.ಆರ್ ಚಂದ್ರಶೇಖರ ಅವರನ್ನು ಸೇವೆಯಿಂದ ವಜಾ ಮಾಡಲು ಸಿಂಡಿಕೇಟ್ ಸಭೆ ನಿರ್ಧರಿಸಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೆಸರನ್ನು ದುರ್ಬಳಕೆ ಮಾಡಿಕೊಂಡು, ರಾಯಚೂರು ಜಿಲ್ಲಾ ಪಂಚಾಯ್ತಿಯೊಂದಿಗೆ ರೂ 98 ಲಕ್ಷ ವ್ಯವಹಾರ ನಡೆಸಿ, ಯಾವುದೇ ಖರ್ಚು ವೆಚ್ಚಗಳ ಮಾಹಿತಿ ನೀಡದ ಆರೋಪಗಳಿಗೆ ಗುರಿಯಾದ ಡಾ. ಚಂದ್ರಶೇಖರ ವಿರುದ್ಧ ಏಕ ಸದಸ್ಯ ಆಯೋಗ ರಚಿಸಿ ತನಿಖೆ ನಡೆಸಲಾಗಿತ್ತು.
ಚಂದ್ರಶೇಖರ ಆರೋಪಿ ಎಂದು ಆಯೋಗ ನೀಡಿದ ವರದಿಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾ ಮಾಡಲು ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಯಿತು.