ಭಾವಗೀತೋತ್ಸವದಲ್ಲಿ ಕಲಾವಿದ ಬಾಗೂರು ಮಾರ್ಕಂಡೇಯ ರಚಿಸಿದ `ಎಲ್ಲೋ ಕೊಳಲಿನ ಮಧುರ ದನಿಯದು~ ಗೀತೆಯನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಶಮಿತಾ ಮಲ್ನಾಡ್ ಗಾಯನಕ್ಕೆ ಅಲ್ಲಿದ್ದ ಪ್ರೇಕ್ಷಕರು ತಲೆದೂಗಿದ್ದರು.
ಬಾಗೂರು ಮಾರ್ಕಂಡೇಯ ಸಿದ್ಧಪಡಿಸಿದ ಕನ್ನಡ ಕಲಿಕೆಗೆ ಸಹಾಯಕವಾಗುವ `ಕನ್ನಡ ಸೌರಭ~ ಸೀಡಿ ಲೋಕಾರ್ಪಣೆ ಹಾಗೂ ಮಾರ್ಕಂಡೇಯ ರಚನೆಯ ಗೀತೆಗಳ ಗಾಯನೋತ್ಸವ ಕಾರ್ಯಕ್ರಮ ಅದಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಕಾರ್ಯಕ್ರಮ ಉದ್ಘಾಟಿಸಿದರು. ಭಾವಗೀತೋತ್ಸವದಲ್ಲಿ ಡಾ. ಶಮಿತಾ ಮಲ್ನಾಡ್, ಕೆ.ಎಸ್ ಸುರೇಖಾ, ಆನಂದ್ ಮಾದಲಗೆರೆ, ರವೀಂದ್ರ ಸೊರಗಾವಿ ಹಾಗೂ ಮಕ್ಕಳ ಗಾಯನ ಸುಧೆಯಲ್ಲಿ ಸಂಗೀತಾಸಕ್ತರು ತನ್ಮಯರಾಗಿದ್ದರು. ಶಮಿತಾ ಗಾಯನ ಗಂಧರ್ವ ಲೋಕವೊಂದನ್ನು ಸೃಷ್ಟಿಮಾಡಿತ್ತು. ಜೊತೆಗೆ ಯಮುನಾ ಶ್ರೀನಿಧಿ ನೃತ್ಯ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
`ಕನ್ನಡ ಕಲಿಯುವವರಿಗೆ ಏನು ಬೇಕು ಎಂಬುದನ್ನು ಅರಿತು, ಸುಲಭವಾಗಿ ಕಡಿಮೆ ಸಮಯದಲ್ಲಿ ಕಲಿಯುವಂತೆ ಏನಾದರೂ ರೂಪಿಸಬೇಕೆಂದುಕೊಂಡು ಇಂಥದೊಂದು ಪ್ರಯತ್ನ ಮಾಡಿದ್ದೇನೆ. ಅದೇ ಕನ್ನಡ ಸೌರಭ ತಂತ್ರಾಂಶ~ ಎಂದು ಮಾರ್ಕಂಡೇಯ ಹೇಳಿದರು.
`ಮಕ್ಕಳು, ಅನ್ಯಭಾಷಿಕರಷ್ಟೇ ಅಲ್ಲದೆ ಕನ್ನಡ ಮಾತನಾಡುವವರೆಲ್ಲರೂ ಕನ್ನಡ ಸೌರಭದ ಸದುಪಯೋಗ ಪಡೆದುಕೊಳ್ಳಬಹುದು~ ಎಂದರು ಡಾ. ಬೈರಮಂಗಲ ರಾಮೇಗೌಡ. ಮಾಜಿ ಉಪ ಮೇಯರ್ ಹರೀಶ್, ಸಂಗೀತ ನಿರ್ದೇಶಕ ಬಿ.ವಿ ಶ್ರಿನಿವಾಸ್, ಸುಭಾಷ್ ಪ್ರಕಾಶ್, ತಂತ್ರಜ್ಞ ಸುಧಾಕರ್ ಮತ್ತಿತರರು ಸಮಾರಂಭದಲ್ಲಿ ಇದ್ದರು.