`ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು~ ಎಂದು ಹೇಳಿದ ಕವಿ ಯಾರು ಎಂಬುದು ಬಹುಶಃ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಗಳಿಗೆ ಮರೆತು ಹೋಗಿದೆಯೇ?
ಈ ಸಂದೇಹಕ್ಕೆ ಕಾರಣ, ಏನೆಂದರೆ ವಿಶ್ವವಿದ್ಯಾಲಯ ಮತ್ತು ಪ್ರತಿಷ್ಠಾನಗಳ ಸಂಯುಕ್ತ ಪ್ರಯತ್ನದ ಫಲವಾಗಿ ಕುಪ್ಪಳಿಯ ಕುವೆಂಪು ಸಹ್ಯಾದ್ರಿ ದೇಸಿ ವಸ್ತು ಸಂಗ್ರಹಾಲಯದ ಆವರಣದಲ್ಲಿ `ಹೆರಿಟೇಜ್ ವಿಲೇಜ್~ ಎಂಬ `ಇಂಗ್ಲಿಷ್ ಹಳ್ಳಿ~ಯ ನಿರ್ಮಾಣ ಆಗಲಿದೆ ಎಂಬುದು ಮತ್ತು ಅದಕ್ಕೆ ರಾಜ್ಯ ಸರ್ಕಾರ ಐದು ಕೋಟಿ ರೂ ದೇಣಿಗೆಯನ್ನೂ ನೀಡಲು ಸಿದ್ಧವಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
`ಹೆರಿಟೇಜ್ ವಿಲೇಜ್~ ಎಂದರೆ ಇಂಗ್ಲಿಷ್ ಹಳ್ಳಿಯೇ? ಅದು ಅಪ್ಪಟ ಚೆಲುವ ಕನ್ನಡ ತಾಣವಾಗಬೇಕಲ್ಲವೇ? ಹೌದೆಂದರೆ ಅದಕ್ಕೊಂದು ಕನ್ನಡದ ಹೆಸರನ್ನು ಇಡಲಾಗದೆ ಇಂಗ್ಲಿಷ್ ಹೆಸರಿಗೆ ಜೋತು ಬೀಳುವ ದುಃಸ್ಥಿತಿ ಸಂಬಂಧಪಟ್ಟವರಿಗೆ ಏಕೆ ಬಂತು?
`ಕನ್ನಡಕ್ಕಾಗಿ ಹಾಗೆ ಮಾಡಬೇಕು..ಹೀಗೆ ಮಾಡಬೇಕು; ಅಷ್ಟು ಕಡಿಯಬೇಕು, ಇಷ್ಟು ಕೊಚ್ಚಬೇಕು~ ಎಂದೆಲ್ಲ ಭಾಷಣವನ್ನು ಮಾಡುವವರು ಕುಪ್ಪಳಿ ಪರಿಸರದಲ್ಲಿ ಒಡಮೂಡುವ ದೇಸಿ ಸಂಸ್ಕೃತಿಯ ತಾಣದ ಹೆಸರು ಕನ್ನಡದ್ದೇ ಆಗಿರಬೇಕು ಎಂದು ಯಾಕೆ ಯೋಚಿಸುವುದಿಲ್ಲ?