ಗಂಗಾವತಿ: ಬೇರೆ ರಾಜ್ಯಗಳಲ್ಲಿನ ಜನರು ಹೊಂದಿರುವ ಅಲ್ಲಿನ ನಾಡು, ನುಡಿ ಮತ್ತು ಭಾಷೆಯ ಬಗೆಗಿನ ಅಭಿಮಾನಕ್ಕೆ ಹೋಲಿಸಿದರೆ ಕನ್ನಡಿಗರು ಸ್ವಾಭಿಮಾನಿಗಳಲ್ಲ ಎಂಬ ನಿಲುವಿಗೆ ಬರಬೇಕಾಗುತ್ತದೆ ಎಂದು ಹಿರಿಯ ಬಂಡಾಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
ನಗರದ ಅಮರ ವಸತಿ ನಿಲಯದ ಹಿಂಭಾಗದಲ್ಲಿರುವ ಕನ್ನಡಸೇನೆ ಕರ್ನಾಟಕ ಸಂಘಟನೆಯ ತಾಲ್ಲೂಕು ಕಚೇರಿಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಘಟಕದ ಎರಡನೇ ವಾರ್ಷಿಕೋತ್ಸವದಲ್ಲಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು.
ಕನ್ನಡಪರ ಸಂಘಟನೆಗಳು, ನಾಡಿನ, ನೆಲ-ಜಲ ಭಾಷೆಗೆ ದಕ್ಕೆ ಬಂದರೆ ಹೋರಾಡುವ ಉದ್ದೇಶಕ್ಕೆ ಈಗಾಗಲೆ ರಾಜ್ಯದಲ್ಲಿ ಹಲವಾರು ಸಂಘಟನೆಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಬೇರೆ ಯಾವ ರಾಜ್ಯದಲ್ಲೂ ರಾಜ್ಯದ ನೆಲ-ಜಲ ಭಾಷೆಯ ಉಳಿವಿಗೆ ಹೋರಾಡುವ ಸ್ಥಿತಿ ಬಂದಿಲ್ಲ.
ಅಲ್ಲಿನ ಜನರು ತಮ್ಮ ತಾಯ್ನಾಡು ಮತ್ತು ಮಾತೃಭಾಷೆಯ ಬಗ್ಗೆ ಅಷ್ಟೊಂದು ಕಳಕಳಿ ಹೊಂದಿದ್ದಾರೆ. ಆದರೆ ಕರ್ನಾಟಕದಲ್ಲಿ ಆ ಕೆಲಸವಾಗುತ್ತಿಲ್ಲ. ಬೆಂಗಳೂರಿನಂತ ಮಹಾನಗರದಲ್ಲಿ ಕನ್ನಡಿಗರೇ ಪರಕೀಯರಾಗುವಂತ ಸ್ಥಿತಿ ಬಂದೋದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ ನಾಡಿನ ಜನರ ಆಶಯಕ್ಕೆ ತಕ್ಕಂತೆ ನಾಡಿನ ಹಿತ ಕಾಪಾಡುವ ಜವಾಬ್ದಾರಿ ಹೊತ್ತ ಹಲವಾರು ಸಂಘಟನೆಗಳು ಅಸ್ತಿತ್ವಕ್ಕೆ ಬಂದಿವೆ. ಅದರಲ್ಲಿ ಕನ್ನಡ ಸೇನೆಯೂ ಒಂದು. ಸೇನೆ ಎಂದರೆ ಸನ್ನದ್ಧ ತಂಡ ಎಂದರ್ಥ. ಯಾವಾಗಲೂ ಯುದ್ಧಕ್ಕೆ ಸಿದ್ಧರಿರಬೇಕೆಂದು ವಿಠ್ಠಪ್ಪ ಕರೆ ನೀಡಿದರು.
ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡ ಮಾತನಾಡಿದರು. ಉದ್ಯಮಿಗಳಾದ ಸುರೇಶ ಸಿಂಗನಾಳ, ಎನ್. ಸೂರಿಬಾಬು, ವೆಂಕಟೇಶ್ವರರಾವ್ ಶಿಕ್ಷಕರಾದ ಮಲ್ಲನಗೌಡ, ಖಾದರಸಾಬ ಹುಲ್ಲೂರು ಸಂಘಟನೆಯ ಚನ್ನಪ್ಪ ಮಾಳಗಿ, ಚನ್ನಬಸವ ಜೇಕಿನ್, ಮಹೇಶ ಸಿಂಗನಾಳ ಇತರರಿದ್ದರು.