ಕೊಲ್ಹಾರ (ವಿಜಾಪುರ): ಮುಂಬೈನ ಏರ್ ಇಂಡಿಯಾ ತಂಡ, ಸ್ವಾಮಿ ವಿವೇಕಾನಂದ ಯುವಕ ಸಂಘದ ಆಶ್ರಯದ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿತು.
ಸೋಮವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಎಸ್.ಬಿ.ಎಂ. ತಂಡವನ್ನು 20-16 ಪಾಯಿಂಟ್ಗಳಿಂದ ಮಣಿಸಿ ಏರ್ ಇಂಡಿಯಾ, 70 ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿಯೊಂದಿಗೆ ಸಂಭ್ರಮಿಸಿದರು. ರನ್ನರ್ ಅಪ್ ಎಸ್.ಬಿ.ಎಂ. ತಂಡಕ್ಕೆ 50 ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿ.ಯನ್ನು ವಿತರಿಸಲಾಯಿತು.
ಮೂನರೇ ಸ್ಥಾನ ಪಡೆದ ಬೆಂಗಳೂರಿನ ರೈಲ್ವೆ ವ್ಹೀಲ್ ಫ್ಯಾಕ್ಟರಿ ತಂಡ ಹಾಗೂ ನಾಲ್ಕನೇ ಸ್ಥಾನ ಪಡೆದ ನವದೆಹಲಿಯ ರೆಡ್ ಆರ್ಮಿ ತಂಡಕ್ಕೆ ತಲಾ 15 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು.
ರಾಷ್ಟ್ರೀಯ ಕಬಡ್ಡಿ ತಂಡದ ಮಾಜಿ ನಾಯಕ, ಎಸ್.ಬಿ.ಎಂ. ತಂಡಕ್ಕಾಗಿ ಆಡಿದ ಬಿ.ಸಿ. ರಮೇಶ ಉತ್ತಮ ಕ್ಯಾಚರ್ ಪ್ರಶಸ್ತಿಗೆ ಭಾಜನರಾದರೆ, ಏರ್ ಇಂಡಿಯಾದ ಪಂಕಜ್ ಕುಮಾರ್ ಠಾಕೂರ್ ಉತ್ತಮ ರೈಡರ್ ಪ್ರಶಸ್ತಿ ಪಡೆದರು. ಇಬ್ಬರಿಗೂ ಒಂದೊಂದು ಕಲರ್ ಟಿ.ವಿ. ನೀಡಲಾಯಿತು.ವಿಜೇತ ತಂಡಗಳಿಗೆ ಬಸವನ ಬಾಗೇವಾಡಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಬಹುಮಾನ ವಿತರಿಸಿದರು.