ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರನ್ನು ಬಂಧಿಸಿ, ತನ್ನ ವಶಕ್ಕೆ ಪಡೆದಿರುವ ಸಿಬಿಐ ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಸೇರಿದಂತೆ ಒಟ್ಟು 15 ಜನರಿಗೆ ಇದೇ 16ರಂದು ವಿಚಾರಣೆಗಾಗಿ ಹೈದರಾಬಾದ್ಗೆ ಬರುವಂತೆ ಬುಧವಾರ ನೋಟಿಸ್ ಜಾರಿ ಮಾಡಿದೆ.
ಸಿಬಿಐ ಇನ್ಸ್ಪೆಕ್ಟರ್ ಸೀತಾರಾಂ ಮತ್ತಿತರರು ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಜಿ. ಕರುಣಾಕರ ರೆಡ್ಡಿ ಅವರ ನಿವಾಸಕ್ಕೆ ಸಂಜೆ ತೆರಳಿ, ಈ ನೋಟಿಸ್ ಜಾರಿ ಮಾಡಿದ್ದು, ಇತರ 15 ಜನ ಗಣಿ ಮಾಲೀಕರಿಗೂ ಹಾಜರಾಗುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಅಕ್ರಮ ಗಣಿಗಾರಿಕೆ ಹಾಗೂ ಅಂತರರಾಜ್ಯ ಗಡಿ- ಗಣಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸಿಬಿಐ, ಆಂಧ್ರದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಣಿಗಳ ಮಾಲೀಕರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ತುಮುಟಿ ಗಣಿ ಕಂಪೆನಿಯ ಟಪಾಲ್ ಗಣೇಶ್ ಮತ್ತು ಟಪಾಲ್ ಏಕಾಂಬರಂ, ಎಂಬಿಟಿ ಗಣಿ ಕಂಪನಿ ಮಾಲೀಕ ಒಳಗೊಂಡಂತೆ ಅಂತಾರಾಜ್ಯ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಒಟ್ಟು 15 ಗಣಿ ಕಂಪೆನಿಗಳ ಮಾಲೀಕರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಜನಾರ್ದನ ರೆಡ್ಡಿ ಒಡೆತನದ ಓಎಂಸಿ ಹಾಗೂ ಅಂತರಗಂಗಮ್ಮ ಕೊಂಡ ಗಣಿಗಳಲ್ಲಿ ಉತ್ಕೃಷ್ಟ ಪ್ರಮಾಣದ ಅದಿರು ಲಭ್ಯವಿರದಿದ್ದರೂ, ಗಡಿಗೆ ಹೊಂದಿಕೊಂಡಿರುವ ರಾಜ್ಯದ ಗಣಿಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ, ಓಎಂಸಿಯಲ್ಲಿ ಲಭ್ಯವಿರುವ ಅದಿರು ಎಂದು ತೋರಿಸಿರುವ ಆರೋಪವನ್ನು ರೆಡ್ಡಿ ಎದುರಿಸುತ್ತಿದ್ದು, ಗಡಿಗೆ ಹೊಂದಿಕೊಂಡಿರುವ ರಾಜ್ಯದ ಗಣಿ ಮಾಲೀಕರಿಂದ ವಿವರ ಪಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.